ಪೋಷಕರ ಸಭೆ ಹಾಗೂ ಸಮಿತಿ ಸಮನ್ವಯ ಸಭೆ

‘ಮಕ್ಕಳ ಮೂಲಕ ಪೋಷಕರಲ್ಲೂ ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಂದ ಪ್ರಾತ್ಯಕ್ಷಿತಗೊಂಡ ವಿಜ್ಞಾನದ ದೈನಂದಿನ ಬದುಕಿಗೆ ಸಂಬಂಧಿಸಿದ ಪ್ರಯೋಗಗಳು ನಮಗೂ ಕೆಲವಾರು ವಿಷಯಗಳನ್ನು ತಿಳಿಸಿದುವು. ಮಕ್ಕಳ ಪ್ರಯತ್ನ ಶ್ಲಾಘನೀಯ’ – ಶ್ರೀಮತಿ ಆಶಾ (ಪೋಷಕರು)
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆದ ವಿಭಾಗವಾರು ಪೋಷಕರ ಸಭೆಯಲ್ಲಿ ಮಕ್ಕಳಿಂದ ಶ್ಲೋಕ, ಅಮೃತ ವಚನ, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆ, ಕನ್ನಡ ಮತ್ತು ಆಂಗ್ಲ ಭಾಷೆಯ ಭಾಷಣ ಹಾಗೂ ವಿಜ್ಞಾನ ಪ್ರಾತ್ಯಕ್ಷಿಕೆಗಳು ಪ್ರಸ್ತುತಗೊಂಡವು. ಪೋಷಕರೊಂದಿಗೆ ನಡೆದ ಸಂವಾದದಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಅನಂತರ ಪ್ರಥಮ ರೂಪಣಾತ್ಮಕ ಮೌಲ್ಯಮಾಪನದ ಉತ್ತರ ಪತ್ರಿಕೆ ಹಾಗೂ ಪ್ರಗತಿಪತ್ರವನ್ನು ಪರಿಶೀಲಿಸಲಾಯಿತು.

     

 

 

 

 

 

 

 

ಪ್ರತೀ ವಿಭಾಗದಿಂದ ಶಾಲಾ ಶಿಕ್ಷಕ-ರಕ್ಷಕ ಸಮಿತಿ, ಮಾತೃಭಾರತಿ, ಅನ್ನಪೂರ್ಣ ಸಮಿತಿ ಹಾಗೂ ವಿವೇಕ ಸಂಜೀವಿನಿ ಸಮಿತಿಗಳಿಗೆ ಇಬ್ಬರು ಪೋಷಕರನ್ನು ಆಯ್ಕೆ ಮಾಡಲಾಯಿತು. ಅನಂತರ ನಡೆದ ‘ಸಮಿತಿ ಸಮನ್ವಯ’ ಸಭೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ ಇವರು ಮಾತನಾಡಿ ‘ಶಾಲೆಗಳಲ್ಲಿ ಪೋಷಕರ ಪಾತ್ರ ಮಹತ್ತರವಾದುದು. ಒಬ್ಬ ವ್ಯಕ್ತಿ ತನಗೆ ಸಂಬಂಧಿಸಿದ ಸಂಸ್ಥೆಯನ್ನು, ವಿಷಯವನ್ನು ತನ್ನದೆಂದು ಭಾವಿಸಿಕೊಳ್ಳಬೇಕು. ಆಗ ಮಾತ್ರ ಕೆಲಸ ಮಾಡಲು ಮನಸ್ಸು ಶಕ್ತಿ ಬರುತ್ತದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯಬೇಕು. ಜವಾಬ್ದಾರಿಯಿಂದ ವಿಮುಖರಾಗಬಾರದು. ಸಂಘಟನಾತ್ಮಕವಾಗಿ ಮಾಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು’. ಎಂದರು.
ಅನಂತರ ನಡೆದ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ಜಯಂತ ಗೌಡ ಕೆ, ಉಪಾಧ್ಯಕ್ಷರಾಗಿ ಶ್ರೀಮತಿ ಆಶಾ.ಕೆ, ಜೊತೆ ಕಾರ್ಯದರ್ಶಿಗಳಾಗಿ ಯುವರಾಜ ಕೆ ಆಯ್ಕೆಯಾದರು. ಮಾತೃಭಾರತಿ ಅಧ್ಯಕ್ಷೆಯಾಗಿ ಶ್ರೀಮತಿ ಮಂಗಳ ಗೌರಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ಪ್ರೀತಿಕಲಾ, ಜೊತೆಕಾರ್ಯದರ್ಶಿಗಳಾಗಿ ಶ್ರೀಮತಿ ಮಂಜುಳಾ ಆಯ್ಕೆಯಾದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಮೇಶ್ ಪಜಿಮಣ್ಣು ಉಪಸ್ಥಿತರಿದ್ದು ಸಂಸ್ಥೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ನೂತನವಾಗಿ ಆಯ್ಕೆಯಾದ ಎರಡೂ ಸಮಿತಿಗಳ ಅಧ್ಯಕ್ಷರುಗಳು ಸಾಂದರ್ಭಿಕ ನುಡಿಗಳನ್ನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ವಹಿಸಿ ಸರ್ವರ ಸಹಕಾರವನ್ನು ಕೋರಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಿತಿಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಶಿಕ್ಷಕರಾದ ಚಂದ್ರಶೇಖರ ಸುಳ್ಯಪದವು ನಡೆಸಿಕೊಟ್ಟರು. ವೇದಿಕೆಯಲ್ಲಿ ವಿವೇಕ ಸಂಜೀವಿನಿ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ಪೂಜಾರಿ, ಮಾತೃಭಾರತಿಯ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಉಷಾ ಮಹೇಶ್, ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀಮತಿ ನಳಿನಿ ವಾಗ್ಲೆ, ವಿವೇಕ ಸಂಜೀವಿನಿ ಸಮಿತಿಯ ಸಂಯೋಜಕರಾದ ಶ್ರೀಮತಿ ವೀಣಾಸರಸ್ವತಿ,ಅನ್ನಪೂರ್ಣ ಸಮಿತಿ ಸಂಯೋಜಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀಮತಿ ವೀಣಾಸರಸ್ವತಿ ಪ್ರಾರ್ಥಿಸಿ, ಶ್ರೀ ರಾಮ ನಾಯ್ಕ್ ಎಂ ಸ್ವಾಗತಿಸಿ, ಶ್ರೀಮತಿ ಉಮಾ ಮೋಹನ್ ಕಾರ್ಯಕ್ರಮ ನಿರೂಪಿಸಿ ವಂದನೆಗೈದರು. ಅನಂತರ ಶಾಲೆಯ ವಿದ್ಯಾರ್ಥಿಗಳೇ ನೆಟ್ಟು ಬೆಳೆಸಿದ ಔಷಧೀಯ ಸಸ್ಯಗಳನ್ನು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಪೆÇೀಷಕರಿಗೆ ವಿತರಿಸಲಾಯಿತು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Highslide for Wordpress Plugin