” ಭಾರತದ ಹಿರಿಮೆ- ಗರಿಮೆಯನ್ನು ಜಗತ್ತಿನಾತ್ಯಂತ ಸಾರಿದ ಸ್ವಾಮಿ ವಿವೇಕಾನಂದರ ಜನುಮ ದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲು ರಾಷ್ಟ್ರದಾತ್ಯಂತ ಕರೆಕೊಟ್ಟಿರುವ ಹಿನ್ನೆಲೆಯನ್ನು ವಿದ್ಯಾರ್ಥಿ ದಿಶೆಯಿಂದ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ” – ಶ್ರೀ ಹರಿಪ್ರಸಾದ್, ತೃತೀಯ ಬಿಎ ವಿದ್ಯಾರ್ಥಿ, ವಿವೇಕಾನಂದ ಪದವಿ ಕಾಲೇಜು ನೆಹರುನಗರ ಪುತ್ತೂರು.
ದಿನಾಂಕ 12.01.2023ರಂದು ನಮ್ಮ ಶಾಲೆಯಲ್ಲಿ ಜರುಗಿದ ವಿವೇಕಾನಂದ ಜಯಂತಿಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಹರಿಪ್ರಸಾದ್ ಇವರು ಸ್ವಾಮೀಜಿಯವರ ದೃಢಸಂಕಲ್ಪದ ದೃಷ್ಟಾಂತಗಳು ನಮ್ಮಲ್ಲಿ ಭಾರತೀಯತೆಯ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಕಾರಿಯಾಗುವ ಬಗೆಯನ್ನು ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿದ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಡಾ| ದೀಪಕ್ ಕುಮಾರ್ ಇವರು ಭಾರತೀಯ ಶ್ರೇಷ್ಠತೆಯಲ್ಲಿ ಕಲಾಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾದ ಅಗತ್ಯತೆಯನ್ನು ತಿಳಿಸಿದರು. ವ್ಯಕ್ತಿ ಕೌಶಲವನ್ನು ವಿಸ್ತಾರಗೊಳಿಸುವಲ್ಲಿ ವಿದ್ಯಾರ್ಥಿ ದಿಶೆಯಿಂದಲೇ ನಾವು ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವೇಕ ಜಯಂತಿಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಯಾದ ಶ್ರೀಮತಿ ಲಲಿತ, ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ಶ್ರೀಮತಿ ಗೀತಾ ನಿರೂಪಿಸಿ, ಮುಖ್ಯ ಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಸ್ವಾಗತಿಸಿದರು. ಶಾಲಾ ಶಿಕ್ಷಕ ವೃಂದ ಮತ್ತು ಪೋಷಕ ವೃಂದವರು ಉಪಸ್ಥಿತರಿದ್ದರು.