ಬರಬರುತ್ತಾ ಕೃಷಿ ವಲಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಅದರಲ್ಲೂ ಕೃಷಿಕೂಲಿಯಾಳುಗಳ ಕೊರತೆ ಬಹಳ ಗಂಭೀರವಾಗಿದ್ದು ಇದಕ್ಕೆ ಪರಿಹಾರವಾಗಿ ಎಷ್ಟೇ ಯಂತ್ರೋಪಕರಣ ಬಂದಿದೆಯಾದರೂ ಸಮಸ್ಯೆಗಳು ಮುಗಿಯಲೇ ಇಲ್ಲ. ಇದನ್ನು ಮನಗಂಡು ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ತಯಾರು ನಡೆಸುತ್ತಿರುವ ಸ್ಕೌಟ್ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಒಂದು ಆದರ್ಶನೀಯ. ಇತ್ತೀಚೆಗೆ ಮೊಟ್ಟೆತ್ತಡ್ಕದಲ್ಲಿ ಉಪೇಂದ್ರ ಬಲ್ಯಾಯ ರವರ ಭತ್ತದ ಗದ್ದೆಯಲ್ಲಿ ಭತ್ತದ ನರ್ಸರಿ(ನೇಜಿ) ತಯಾರು ಮಾಡಿ, ನೇಜಿ ತೆಗೆದು ಸಮಯಕ್ಕೆ ಸರಿಯಾಗಿ ನಾಟಿ ಮಾಡಿ ಪೂರೈಸಿರುತ್ತಾರೆ. ಮುಂದೆ ಕಳೆ ತೆಗೆಯುವುದು, ಗೊಬ್ಬರಗಳ ಬಳಕೆ ಬಗ್ಗೆ ಮಾಹಿತಿಯನ್ನು ಪಡೆಯಲಿದ್ದಾರೆ. ಇವರಿಗೆ ಶಾಲಾ ಸ್ಕೌಟ್ಸ್ ಶಿಕ್ಷಕ ಶ್ರೀ ವಿಶ್ವನಾಥ ಮುಡೂರು ರವರು ನಿರ್ದೇಶನ ನೀಡಿರುತ್ತಾರೆ.