ಸಂಸ್ಕಾರಯುತ ಮತ್ತು ಮಾತೃಭಾಷೆಯ ಶಿಕ್ಷಣ ದೊರೆತಲ್ಲಿ ಮಗುವಿನ ಸರ್ವಾಂಗೀಣ ಏಳಿಗೆ ಸಾಧ್ಯ. ಭಾರತೀಯ ಪರಿಕಲ್ಪನೆ ಹೊಂದಿರುವ, ವೈಜ್ಞಾನಿಕ ಭಾಷೆಯಾದ ಕನ್ನಡ ಭಾಷೆಯು ಅರ್ಥಪೂರ್ಣವಾದ ಸಂಬಂಧಗಳನ್ನು ಬೆಸೆಯುವ ಹೃದಯದ ಭಾಷೆಯಾಗಿದೆ. ಮಾತೃ ಭಾಷೆಯ ಶಿಕ್ಷಣದಿಂದ ಮಗುವಿನಲ್ಲಿ ಆನಂದದ ಕಲಿಕೆ ಸಾಧ್ಯ ಎಂದು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಪ್ರಮುಖರಾದ ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ನಡೆದ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನದಲ್ಲಿ ಶ್ರೀಯುತ ಅಚ್ಯುತ ನಾಯಕ್ರವರು ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ಮನೆ ಮತ್ತು ಶಾಲೆಯ ಮೂಲಕ ಮಾತ್ರ ಸಾಧ್ಯ ಎಂದರು.






ಪ್ರತಿ ವಿಭಾಗಗಳಲ್ಲೂ ನಡೆದ ಶಿಕ್ಷಕ- ಪೋಷಕ ಸಂವಾದದಲ್ಲಿ ವಾರ್ಷಿಕ ಶೈಕ್ಷಣಿಕ ಇತರ ಚಟುವಟಿಕೆಗಳನ್ನು ಪೋಷಕರಿಗೆ ತಿಳಿಸಲಾಯಿತು. ಶಿಕ್ಷಕರೊಂದಿಗಿನ ಪೋಷಕರ ಮುಕ್ತ ಮಾತು -ಕತೆಯಲ್ಲಿ ಮಕ್ಕಳ ಪ್ರಗತಿಗೆ ವಿಶೇಷ ಗಮನ ನೀಡಲಾಯಿತು. ಶಾಲಾ ಸಭಾಂಗಣದಲ್ಲಿ ಚಟುವಟಿಕಾತ್ಮಕ ಕಲಿಕೆಗೆ ಸಂಬಂಧಿಸಿ ಶಿಕ್ಷಕರು ಮತ್ತು ಮಕ್ಕಳು ತಯಾರಿಸಿದ ಕಲಿಕೋಪಕರಣ ಪ್ರದರ್ಶನ ನಡೆಯಿತು. ವಿಶ್ವಯೋಗ ದಿನದಂದು ಪೋಷಕರಿಗೆ ನಡೆಸಲಾಗುವ ಸೂರ್ಯನಮಸ್ಕಾರ, ಸರಳ ವ್ಯಾಯಾಮ ಮತ್ತು ಪ್ರಾಣಾಯಾಮಗಳ ಪ್ರಾತ್ಯಕ್ಷಿಕೆ ನಡೆಯಿತು.
ಅನಂತರ ಶಿಕ್ಷಕ-ರಕ್ಷಕ ಸಂಘ ಮತ್ತು ಮಾತೃಭಾರತಿ ಮಂಡಳಿಗೆ ಸದಸ್ಯರ ಆಯ್ಕೆ ನಡೆಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಮುಖ್ಯಗುರುಗಳು, ಶಿಕ್ಷಕ- ಶಿಕ್ಷಕೇತರ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು. ಕು. ಧನ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.