ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಅಟಲ್ ಟಿಂಕರಿಂಗ್ ಉತ್ಸವ- 2019’ ಕಾರ್ಯಕ್ರಮವನ್ನು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸತೀಶ್ರವರು ಉದ್ಘಾಟಿಸಿ ಶುಭ ಹಾರೈಸಿದರು.
ಸಭಾಧ್ಯಕ್ಷರೂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳೂ ಆದ ಡಾ. ಕೃಷ್ಣ ಭಟ್ ಕೊಂಕೋಡಿಯವರು ಮಾತನಾಡಿ ಅನ್ವೇಷಣೆ ಎಂಬುದು ಸಂಶೋಧನೆಯ ತಾಯಿ. ನಿತ್ಯ ಜೀವನದಲ್ಲಿ ಅಗತ್ಯವಾದ ಸಣ್ಣಪುಟ್ಟ ಕೌಶಲ್ಯಗಳನ್ನು ಅಳವಡಿಸಿಕೊಳ್ಳುತ್ತಾ ಪ್ರಶ್ನಿಸುವ ಮನೋಭಾವ, ಕುತೂಹಲ ಪ್ರವೃತ್ತಿ, ಪರಿಶ್ರಮ, ಆಧುನಿಕ ಸೌಲಭ್ಯಗಳ ಬಳಕೆಯ ಜೊತೆಗೆ ಆತ್ಮವಿಶ್ವಾಸದಿಂದ ಹಂತಹಂತವಾಗಿ ಮೇಲೇರಿದಾಗ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ಮಾರ್ಗದರ್ಶಿ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಶ್ರೀಶ ಮಾತನಾಡಿ ಆತ್ಮವಿಶ್ವಾಸದಿಂದ ಪರಿಶ್ರಮಿಸುವ ವ್ಯಕ್ತಿಗೆ ಬಡತನ, ಸೋಲು ಯಾವುದೂ ಗೆಲುವಿನ ಹಾದಿಗೆ ತಡೆಯೊಡ್ಡುವುದಿಲ್ಲ. ಜೀವನದಲ್ಲಿ ಯಶಸ್ಸನ್ನು ಗಳಿಸಲು ಉತ್ತಮ ಅಭಿರುಚಿಯೊಂದಿಗೆ ವಿಷಯ ಜ್ಞಾನವನ್ನು ಸಂಪಾದಿಸುತ್ತಾ ಮುಂದುವರೆಯಬೇಕು. ಜೊತೆಗೆ ಮಾನವೀಯ ಮೌಲ್ಯಗಳು, ವ್ಯಕ್ತಿಗತ ಸಂಬಂಧಗಳನ್ನೂ ಗಟ್ಟಿಗೊಳಿಸಿಕೊಂಡಾಗ ಬದುಕು ಸಾರ್ಥಕ್ಯ ಪಡೆದುಕೊಳ್ಳುತ್ತದೆ ಎಂದರು.
ಅಟಲ್ ಟಿಂಕರಿಂಗ್ ಪ್ರಯೋಗಾಲಯದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಆಗಮಿಸಿದ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಮಾದರಿ ಪ್ರದರ್ಶನಗಳ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮಾದರಿ ತಯಾರಿಗೆ ತರಬೇತಿ ನೀಡುತ್ತಾ ತಾವು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ಸಂಯೋಜಕರಾದ ಶ್ರೀ ರವೀಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾರ್ಗದರ್ಶಿ ಶಿಕ್ಷಕರಾದ ಎಸ್. ಪಿ. ಮಂಜುನಾಥ, ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್ ಇತರ ಸದಸ್ಯರು, ಮುಖ್ಯ ಗುರುಗಳು, ಶಿಕ್ಷಕ- ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕರಾದ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ. ಶ್ರೀಮತಿ ಶಾಲಿನಿ ವಂದಿಸಿದರು, ಶ್ರೀಮತಿ ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.