ವೃಕ್ಷೋ ರಕ್ಷತಿ ರಕ್ಷಿತಃ – ಡಾ. ಸುರೇಶ್ ಪುತ್ತೂರಾಯ

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಪರಿಸರದಲ್ಲಿ ಶುದ್ಧ ನೀರು, ಗಾಳಿ, ಮಣ್ಣಿನ ಅವಶ್ಯಕತೆ ಅರಿತವರಾಗಿದ್ದು ಗಿಡ ಮರಗಳನ್ನು ಆಯಾ ರಾಶಿ, ನಕ್ಷತ್ರಗಳಿಗೆ ಸಂಬಂಧ ಕಲ್ಪಿಸಿ ಆ ನೆಪದಲ್ಲಿ ಪ್ರಕೃತಿ ಆರಾಧನೆ ಮಾಡುತ್ತಿದ್ದರು. ಆದರೆ ಈಗ ಅಭಿವೃದ್ಧಿಯ ಹೆಸರಿನಲ್ಲಿ ಮಾನವ ನಡೆಸುವ ಚಟುವಟಿಕೆಗಳಿಂದ ಶೇಕಡಾ 73 ರಷ್ಟು ಇರಬೇಕಾದ ಕಾಡಿನ ಪ್ರಮಾಣವು ಶೇಕಡಾ 21 ಕ್ಕೆ ಇಳಿದಿದೆ. ಆದುದರಿಂದ ಪರಿಸರದ ಉಳಿವಿಗಾಗಿ ಭಾವೀ ಪ್ರಜೆಗಳಾದ ಮಕ್ಕಳಿಗೆ ಯಾವುದೇ ಗಿಡವಾದರೂ ಸರಿ ನೆಟ್ಟು ಬೆಳೆಸುವ ತಿಳಿವಳಿಕೆ ನೀಡಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸೋಣ ಎಂದು ವಲಯ ಅರಣ್ಯಾಧಿಕಾರಿಗಳಾದ (ಆರ್.ಎಫ್.ಒ) ಶ್ರಿಮತಿ ವಿದ್ಯಾರಾಣಿಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಬೆಳ್ಳಿಹಬ್ಬ ವರ್ಷದ ಪ್ರಯುಕ್ತ ಆಯೋಜಿಸಿದ ’ಕೋಟಿ ವೃಕ್ಷ ಆಂದೋಲ’ನದ ಅಂಗವಾಗಿ ಆಯೋಜಿಸಿದ ಪೋಷಕರಿಗೆ ಗಿಡ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

VKMS-Parisara Abhiyana

VKMS-Parisara Abhiyana (3)

VKMS-Parisara Abhiyana (2)

VKMS-Parisara Abhiyana (1)

VKMS-Parisara Abhiyana (4)

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾಗಿರುವ ಡಾ.ಕೃಷ್ಣ ಭಟ್ ಕೊಂಕೋಡಿಯವರು ಇನ್ನೊರ್ವ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡುತ್ತಾ ಪ್ರಕೃತಿಯು ಎಲ್ಲಾ ಜೀವಿಗಳಿಗೂ ಪರಿಶುದ್ಧವಾದ ಗಾಳಿ, ನೀರು, ಮಣ್ಣಿನ ಕೊಡುಗೆ ನೀಡಿದೆ. ಗಿಡ ಮರಗಳು ಮೇಲ್ಮಣ್ಣಿಗೆ ಘಾಸಿಯಾಗದಂತೆ ಮಳೆ ನೀರಿನ ರಭಸ ತಡೆದು ಮಣ್ಣಿನ ಸವೆತ ತಪ್ಪಿಸುತ್ತದೆ. ಭೂತಾಪ ಏರದಂತೆ, ವಾಯುಮಾಲಿನ್ಯಆಗದಂತೆ ನೀರಿನ ಬತ್ತುವಿಕೆ ತಪ್ಪಿಸುತ್ತದೆ. ಹಿರಿಯರಿಂದ ನಮಗೆ ಬಂದಂತಹ ಸಮೃದ್ಧ ಸಸ್ಯ ಶ್ಯಾಮಲೆ ಭೂಮಿಯನ್ನು ಯಥಾವತ್ತಾಗಿ ನಮ್ಮ ಮುಂದಿನ ತಲೆಮಾರಿಗೆ ವರ್ಗಾವಣೆ ಮಾಡುವ ಮಹತ್ತರ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಸುರೇಶ್ ಪುತ್ತೂರಾಯ ಇವರು ಮನುಕುಲದ ಉಳಿವಿಗಾಗಿ ’ವೃಕ್ಷೋ ರಕ್ಷತಿ ರಕ್ಷಿತಃ’ ಎಂಬ ಮಾತನ್ನು ನೆನಪಿನಲ್ಲಿರಿಸಿಕೊಂಡು ಗಿಡ ಮರ ಕಡಿದು ನಾಶಗೊಳಿಸದೆ ಸಸ್ಯ ಸಂಕುಲದ ಮಹತ್ವ ಅರಿತು ಜವಾಬ್ದಾರಿಯರಿತ ನಾಗರಿಕರಾಗಿ ಸ್ವಚ್ಛ, ಸುಂದರ ಪರಿಸರವನ್ನು ಉಳಿಸಿ ಬೆಳೆಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅತಿಥಿ ಗಣ್ಯರು ಶಾಲಾ ಪೋಷಕರಿಗೆ ಗಿಡಗಳನ್ನು ವಿತರಿಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ವಿನೋದ್ ಕುಮಾರ್ ರೈ ಗುತ್ತು, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಎಂ.ಎಸ್.ಪ್ರಸಾದ್ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಗುರು ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಮಾತಾಜಿಯವರು ಪ್ರಾರ್ಥಿಸಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು, ಪ್ರೌಢಶಾಲಾ ಮುಖ್ಯಗುರು ಆಶಾ ಬೆಳ್ಳಾರೆಯವರು ಧನ್ಯವಾದ ಸಮರ್ಪಿಸಿದರು. ಶ್ರಿ ಚಂದ್ರಶೇಖರ್ ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin