ಹೆಚ್ಚು ವಿಧದ ಸಸ್ಯ ಸಂಕುಲಗಳನ್ನು ಬೆಳಿಸಿ ಪೋಷಿಸಿದಾಗ ಪ್ರಕೃತಿಯಲ್ಲಿ ಜೀವ ವೈವಿಧ್ಯತೆಗೆ ಅವಕಾಶ ಉಂಟಾಗುವುದರಿಂದ ನಿಸರ್ಗ ಸ್ನೇಹಿ ವ್ಯವಸ್ಥೆ ನಿರ್ಮಾಣವಾಗುತ್ತದೆ. ನಾವಿರುವ ಪರಿಸರವು’ಶೂನ್ಯಕಾರ್ಬನ್ ಎನಿಸಿಕೊಂಡು’ ಸ್ವಸ್ಥ ಸುಂದರ ತಾಣವಾಗಿ ಬದಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಿರಿಯರು ಆಸಕ್ತಿ ಹೊಂದಿ ತಮ್ಮನ್ನು ತೊಡಗಿಸಿಕೊಳ್ಳಲು ’ವಿಶ್ವ ಪರಿಸರ ದಿನ’ದಂತಹ ಆಚರಣೆಗಳು ಸಹಕಾರಿಎಂದು ಆರ್ಯುವೇದ ತಜ್ಞ ಹಾಗೂ ಪರಿಸರ ಪ್ರೇಮಿಯು ಆಗಿರುವ ಜೆಡ್ಡು ಗಣಪತಿ ಭಟ್ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದ ’ವೃತಿಕಾ’ ವಿಜ್ಞಾನ ಸಂಘವು ಹಮ್ಮಿಕೊಂಡ ವಿಶ್ವ ಪರಿಸರ ದಿನ ಆಚರಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಫಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿಯವರು ಗಿಡ ನೆಡುವ ಮೂಲಕ ನಮಗೆ ಮತ್ತು ಪರಿಸರಕ್ಕೆ ಸಂಪರ್ಕ ಸೇತುವೆ ನಿರ್ಮಿಸುವಂತಹ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಅದನ್ನು ಪೋಷಿಸಿ ರಕ್ಷಿಸುವ ಹೊಣೆ ನಮ್ಮಲ್ಲಿರಲಿ ಎಂಬ ಕಿವಿ ಮಾತು ಹೇಳಿ ಶುಭ ಹಾರೈಸಿದರು.


2017-18 ನೇ ಸಾಲಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಬೆಳ್ಳಿಹಬ್ಬ ಆಚರಿಸುತ್ತಿರುವ ನಿಟ್ಟಿನಲ್ಲಿ ಯೋಜನೆಗಳನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಎಲ್ಲೆಡೆಯೂ ಹಸಿರು ಪರಿಸರವನ್ನು ಬೆಳೆಸುವುದಾಗಿದೆ. ಈ ಕಾರ್ಯಕ್ರಮವನ್ನು ಮೂರು ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವುದು ಹಾಗೂ ಸುಂದರ ಕೈತೋಟ ನಿರ್ಮಾಣ ಮಾಡುವುದು ಮೊದಲನೇ ಹಂತವಾಗಿರುತ್ತದೆ. ಸುಮಾರು 950 ಮಕ್ಕಳು ಕಲಿಯುತ್ತಿರುವ ಈ ಶಾಲೆಯ ಎಲ್ಲಾ ಪೋಷಕರಿಗೆ ಗಿಡ ನೀಡಿ ಬೆಳೆಸುವಂತೆ ಪ್ರೇರೇಪಿಸುವುದು ಎರಡನೇ ಹಂತವಾದರೆ, ಪುತ್ತೂರು ತಾಲೂಕಿನ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿ ಶಾಲೆಯ ವತಿಯಿಂದ ಗಿಡ ನೆಡುವುದು ಮೂರನೇ ಹಂತವಾಗಿರುತ್ತದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಿಗೆ ಮತ್ತು ಆಡಳಿತ ಮಂಡಳಿಯವರಿಗೆ ವಿವಿಧ ಜಾತಿಯ ಸಸಿ ವಿತರಣೆ ಮಾಡಿ, ಶಾಲಾ ಆವರಣದಲ್ಲಿ ಅತಿಥಿಗಳು ಮತ್ತು ಮಕ್ಕಳು, ಶಿಕ್ಷಕ ವೃಂದದವರು ಸಸಿಗಳನ್ನು ನೆಟ್ಟು ನೀರುಣಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಚ್ಯುತ ನಾಯಕ್, ಸಂಚಾಲಕರಾದ ವಿನೋದ್ ಕುಮಾರ್ ರೈ, ಶಾಲಾ ಮುಖ್ಯ ಗುರುಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಶ್ರೇಯಾ ಪ್ರಾರ್ಥಿಸಿ, ಕು.ಅಶ್ವಿನಿ ಮಾತಾಜಿ ಸ್ವಾಗತಿಸಿ, ಶ್ರೀಮತಿ ಅನುಷಾ ಮಾತಾಜಿ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ರೇಶ್ಮಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.