ಬೆಳ್ಳಿಹಬ್ಬ ಆಚರಣೆಯ ಹೊಸ್ತಿಲಲ್ಲಿರುವ ಸಂಸ್ಥೆಯ ಸಂಭ್ರಮದ ಕ್ಷಣಗಳ ಆರಂಭವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಆರಂಭೋತ್ಸವ ನಡೆಯಿತು. 1993 ರಲ್ಲಿ 7 ಮಕ್ಕಳಿಂದ ಆರಂಭಗೊಂಡ ಸಂಸ್ಥೆಯಲ್ಲಿ ಕಳೆದ ಶೈಕ್ಷಣಿಕ ವರ್ಷ 871 ಮಕ್ಕಳಿದ್ದು 2017-18 ನೇ ಸಾಲಿನಲ್ಲಿ ಸುಮಾರು 950 ಮಕ್ಕಳ ಕಲಿಕಾ ಕೇಂದ್ರವಾಗಿ ’ಶೇಷಾದ್ರಿ’ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ಪ್ರಸಕ್ತ ವರ್ಷ 70 ಮಕ್ಕಳು ಹೊಸದಾಗಿ ಸೇರ್ಪಡೆಗೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಆಡಳಿತ ಮಂಡಳಿ ಮತ್ತು ಪೋಷಕ ವೃಂದ ಕನ್ನಡ ಭಾಷಾ ಶಾಲೆಯಾಗಿ ವಿವೇಕಾನಂದ ಕನ್ನಡ ಶಾಲೆ ಒಂದು ಪ್ರಗತಿಪರ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿದೆ ಎಂದು ನುಡಿದರು. ಆರಂಭದ ದಿನ ಎಲ್ಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ತಿಲಕವಿಟ್ಟು ಸ್ವಾಗತಿಸಿದರು.



ಅನಂತರ ಹನುಮಾನ್ ಚಾಲೀಸಾ, ಭಗವದ್ಗೀತೆ ಪಠಣ, ಸರಸ್ವತೀ ವಂದನೆಯೊಂದಿಗೆ ಮುಂದುವರಿಯಿತು. ಬಂದಂತಹ ಪೋಷಕರು ಮಕ್ಕಳೊಂದಿಗೆ ಘೃತಾಹುತಿ ಮಾಡಿ ಹೆತ್ತವರ ಪಾದಗಳ ನಮಸ್ಕರಿಸಿ ಭಾರತಮಾತೆಯ ಭಾವಚಿತ್ರಕ್ಕೆ ನಮಿಸಿ ಪರಸ್ಪರ ಸಿಹಿ ಹಂಚಿಕೊಂಡು ಖುಷಿಪಟ್ಟರು. ಭಾವನಾತ್ಮಕವಾಗಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಚುತ ನಾಯಕ್, ಖಜಾಂಚಿ ವಸಂತ ಸುವರ್ಣ, ಸದಸ್ಯರಾದ ರಮೇಶ್ಚಂದ್ರ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಸಂಪೂರ್ಣ ಕಾರ್ಯಕ್ರಮವನ್ನು ಚಂದಗಾಣಿಸುವಲ್ಲಿ ನಡೆಸಿದ ಶ್ರಮವನ್ನು ಮೆಚ್ಚಿದ ಪೋಷಕರು ನಮ್ಮ ನೆಲದ ಮನದ ಸಂಸ್ಕೃತಿ – ಸಂಸ್ಕಾರಗಳನ್ನು ನೀಡುತ್ತಿರುವುದು ನಮಗೆ ಖುಷಿಯಾಗಿದೆ ಎಂದರು.