“ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಪರಿಶ್ರಮದಿಂದ ಉತ್ಕೃಷ್ಟ ಸಾಧನೆ ಮಾಡಬೇಕು. ಆ ಮೂಲಕ ಗುರುವನ್ನೇ ಮೀರಿಸಿದ ಶಿಷ್ಯ ಎಂದು ಕಲಿಸಿದ ಗುರುಗಳು ಹೆಮ್ಮೆ ಪಡುವಂತಾಗಬೇಕು” ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರರವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ಪ್ರತಿಭಾ ಪುರಸ್ಕಾರ’ ೨ನೇ ಅವಧಿಯ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಕೋಶಾಧಿಕಾರಿಗಳಾದ ಶ್ರೀ ಅಶೋಕ್ ಕುಂಬ್ಳೆ ಶುಭ ಹಾರೈಸಿದರು.
ಅಭ್ಯಾಗತರಾಗಿ ಆಗಮಿಸಿದ್ದ ಅಡ್ವಾನ್ಸ್ ಟ್ಯಾಕ್ಸ್ ಅನಾಲಿಸ್ಟ್ ಯಂಗ್ ಎಲ್.ಎಲ್.ಪಿ, ಬೆಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಹಿರಿಯ ವಿದ್ಯಾರ್ಥಿ ಶ್ರೀ ಸುಕೇಶ್ ಪಿ ಇವರು “ಶಿಕ್ಷಕರ ಬೆಂಬಲ, ಕಲಿಸಿದ ವಿದ್ಯೆಯೇ ನನ್ನನ್ನು ಗಟ್ಟಿಗೊಳಿಸಿದೆ. ಏನಾದರೂ ಸಾಧಿಸಲು ಪ್ರೇರಣೆ ನೀಡಿದೆ” ಎಂದು ಹೇಳುತ್ತಾ ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿಕೊಂಡರು.
ವೇದಿಕೆಯಲ್ಲಿದ್ದ ಪೋಷಕರೂ ಶಾಲಾ ಶಿಕ್ಷಕ – ರಕ್ಷಕ ಸಂಘದ ಸದಸ್ಯರೂ ಆದ ಶ್ರೀ ಮುರಳೀಧರ ನಾಯಕ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸಹಶಿಕ್ಷಕಿ ಶ್ರೀಮತಿ ನಮಿತಾ ಕೆ.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಗ್ರೀಷ್ಮಾ ನಿರೂಪಿಸಿ ವಿದ್ಯಾರ್ಥಿ ಅದ್ವಿತ್ ಧನ್ಯವಾದ ಸಮರ್ಪಿಸಿದರು.