ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಮಹಾತ್ವಾಕಾಂಕ್ಷೆ ಯೋಜನೆ ವಿವೇಕ ಸಂಜೀವಿನಿಯ ಶಾಲಾ ಅನುಷ್ಠಾನಿಕ ಭಾಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಶ್ರೀರಾಮ ಭಜನಾ ಮಂದಿರ ಕೆದಿಲ, ಊರ ನಾಗರಿಕರ ಸಹಯೋಗದಲ್ಲಿ ಗ್ರಾಮ-ಸಂಜೀವಿನಿ ಯೋಜನೆಗೆ ಚಾಲನೆ ನೀಡಿದವರು ಕೆದಿಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಜಯಂತಿ ಧನಂಜಯ ಶೆಟ್ಟಿ ಇವರು. ‘ಶಾಲೆಯಿಂದ ಗ್ರಾಮಗಳಲ್ಲಿ ನಡೆಯುತ್ತಿರುವ ಅನ್ಯಾನ್ಯ ಕಾರ್ಯಕ್ರಮಗಳಾದ ಬದು ನಿರ್ಮಾಣ, ಗದ್ದೆ ಕೊಯ್ಲು, ಭಜನಾ ಉತ್ಸವ, ಗ್ರಾಮ ಸಮೀಕ್ಷೆ- ಸ್ವಚ್ಛತೆ, ಆರೋಗ್ಯ ಮಾಹಿತಿ, ಯೋಗ ಪ್ರಾತ್ಯಕ್ಷಿಕೆಗಳು ಗ್ರಾಮದ ಜನರಿಗೆ ಸಹಕಾರಿಯಾಗಿದ್ದು ಶಾಲೆ ಹಾಗೂ ಕೆದಿಲ ಗ್ರಾಮದ ಜನರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲು ನೆರವಾಗಿದೆ” ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಹಿರಿಯ ವಿದ್ಯಾರ್ಥಿ ಅಶ್ವಥ್ ಮಾತನಾಡಿ, ‘ಗ್ರಾಮದಲ್ಲಿ ಯಾವತ್ತೂ ಇಂತಹ ಉತ್ತಮ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿದೆ’ ಎಂದರು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಯೋಜನೆಯ ವಿವರವನ್ನು ನೀಡಿದರು.
ಈ ಸಂದರ್ಭದಲ್ಲಿ ನಾಟಿ ವೈದ್ಯರಾದ ಶ್ರೀ ವಿಶ್ವನಾಥ ಪೂಜಾರಿ ಮುರುವ ಇವರನ್ನು ಊರ ನಾಗರಿಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಶ್ರೀಯುತರು ಔಷಧೀಯ ಗಿಡಮೂಲಿಕೆಗಳ ಬಗ್ಗೆ ಹಾಗೂ ನಾಟಿ ಔಷಧಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ಶ್ರೀರಾಮ ಭಜನಾ ಮಂದಿರದ ಉಪಾಧ್ಯಕ್ಷರಾದ ಶ್ರೀ ಶಿವರಾಮ ಭಟ್ ಉಪಸ್ಥಿತರಿದ್ದರು. ಗ್ರಾಮ – ಸಂಜೀವಿನಿ ಕಾರ್ಯಕ್ರಮದ ಸಂಯೋಜಕ ಚಂದ್ರಶೇಖರ್ ಸುಳ್ಯಪದವು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಗಿಡಗಳನ್ನು ನೆಡಲಾಯಿತು.