ದೈಹಿಕ ಶಿಕ್ಷಕನಾಗಿ ಹತ್ತಾರು ವರುಷಗಳಲ್ಲಿ ನಾನು ತರಬೇತುಗೊಳಿಸಿದ ವಿದ್ಯಾರ್ಥಿಗಳು ರಾಷ್ಟ್ರ-ಅಂತಾರಾಷ್ಟ್ರ ಮಟ್ಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಾವು ನಮ್ಮಲ್ಲಿ ರೂಢಿಸಿಕೊಳ್ಳುವ ಶಿಸ್ತು-ಸಮಯ ಪ್ರಜ್ಞೆ,ವೃತ್ತಿ ಕಾಳಜಿ ಬದುಕನ್ನು ಅರ್ಥಪೂರ್ಣವಾಗಿಸುತ್ತದೆ – ದಯಾನಂದ ರೈ ಕೋರ್ಮಂಡ.




ವಿವೇಕಾನಂದ ಕನ್ನಡ ಶಾಲಾ ಮಹತಿ-ಕನ್ನಡ ಸಂಘದ ವತಿಯಿಂದ 10 ನೇ ತರಗತಿಯ ಮಕ್ಕಳು ಆಯೋಜಿಸಿದ ’ಗುರು-ಅಭಿನಂದನೆ’ ಸ್ವೀಕರಿಸಿ ಶ್ರೀಯುತರು ನನ್ನ ಬದುಕಿನಲ್ಲಿ ಈ ದಿನ ಮರೆಯಲಾಗದ ದಿನ. ನನ್ನ ಮನೆಗೆ ಬಂದು ಅಭಿನಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ನನ್ನ ಮನೆ-ಮನ ಪಾವನವಾದ ಅನುಭವವಾಗುತ್ತಿದೆ ಎಂದರು.
ಬೆಟ್ಟಂಪಾಡಿಯ ನವೋದಯ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ದಯಾನಂದ ರೈ ಕೋರ್ಮಂಡ ಅವರ ಸ್ವ-ಗೃಹಕ್ಕೆ ತೆರಳಿದ ಶಾಲಾ ಆಡಳಿತ ಮಂಡಳಿ, ಶಿಕ್ಷಕ ಹಾಗೂ ವಿದ್ಯಾರ್ಥಿ ತಂಡವು ಗುರುಪೂರ್ಣಿಮೆಯ ಅಂಗವಾಗಿ ಗುರು ನಮನ ಸಲ್ಲಿಸಿದರು.
ಮಕ್ಕಳ ಆಶಯ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ತನ್ಮಯಕೃಷ್ಣ ಗುರುನಮನದ ಮಹತ್ವ ತಿಳಿಸಿದರು. ವಿದ್ಯಾರ್ಥಿಗಳಾದ ದೀಮಂತ್ ಹಾಗೂ ದಿಗಂತ್ ದೀಪ ಪ್ರಜ್ವಲಿಸಿ ದೀಪ ಪ್ರದಾನಕ್ಕೆ ಚಾಲನೆ ನೀಡಿದರು. ಶಾಂತಿ ಮಂತ್ರದೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮದಲ್ಲಿ ಶ್ರೀಯುತ ದಯಾನಂದ ರೈ ಹಾಗೂ ಚಿತ್ರಾ ದಂಪತಿಗಳು ಉಪಹಾರ ನೀಡಿ ಬೀಳ್ಕೊಟ್ಟರು.