ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಶಾಲೆಯಲ್ಲಿ ಡಿಸೆಂಬರ್ 8 ರಂದು ನಡೆದ ಶಾಲಾ ವಾರ್ಷಿಕೋತ್ಸವ ’ವಿವೇಕೋತ್ಸವ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಾಷೆಗಳು ನಾಶವಾದಾಗ ಸಂಸ್ಕೃತಿಗಳು ನಾಶವಾದಂತೆ. ನಮ್ಮ ತನವನ್ನು ಉಳಿಸಿಕೊಳ್ಳಲು ನಾವು ಪ್ರಯತ್ನಿಸಬೇಕು ಎಂದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿ, ಕರ್ನಾಟಕ ಬ್ಯಾಂಕ್ ಉದ್ಯೋಗಿ ಶ್ರೀಮತಿ ಕೃಪಾಶಂಕರಿ ಮಾತನಾಡಿ, ಕನ್ನಡ ಮಾಧ್ಯಮ ದ ಬಗ್ಗೆ ಯಾರಿಗೂ ಹಿಂಜರಿಕೆ ಬೇಡ. ಭಾಷಾ ಮಾಧ್ಯಮವು ಎಲ್ಲಿಯೂ ಅಡ್ಡಿ ಬರುವುದಿಲ್ಲ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬಹುದು ಎಂದರು. ಶಾಲಾ ವಾರ್ಷಿಕ ಸಂಚಿಕೆ ’ಸಾಹಿತ್ಯ ಮಿತ್ರ’ವನ್ನು ದೈಹಿಕ ಪರೀವೀಕ್ಷಣಾಧಿಕಾರಿ ಸುಂದರ ಗೌಡ ಬಿಡುಗಡೆ ಮಾಡಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಕಡಬ ಮಾತನಾಡಿ ಆಂಗ್ಲಮಾಧ್ಯಮ ಮತ್ತು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿರುವ ಮನೋಸ್ಥಿತಿ ಭಿನ್ನವಾಗಿರುತ್ತದೆ. ಪೋಷಕರು ದಾರಿ ತಪ್ಪಿದಾಗ ಅವರನ್ನು ತಿದ್ದುವ ಕಾರ್ಯವೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿ ಕಾಣಬಹುದು. ಮಕ್ಕಳ ಶಿಕ್ಷಣ ಹಣ ಸಂಪಾದನೆಯ ಉದ್ದೇಶವಾಗಿರಬಾರದು. ಮಕ್ಕಳನ್ನು ಆಸ್ತಿಗಳನ್ನಾಗಿ ಬೆಳೆಸಬೇಕು ಎಂದರು.






ಶೈಕ್ಷಣಿಕ, ಸಾಹಿತ್ಯ ಮತ್ತು ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶಾಲಾ ಸಂಚಾಲಕ ರವಿನಾರಾಯಣ ಸ್ವಾಗತಿಸಿದರು. ಮುಖ್ಯಗುರು ಆಶಾ ಬೆಳ್ಳಾರೆ ವರದಿ ವಾಚಿಸಿದರು. ಆಡಳಿತ ಮಂಡಳಿ ಸದಸ್ಯ ರಮೇಶ್ಚಂದ್ರ ಪ್ರಸ್ತಾವಣೆಗೈದರು. ವಿದ್ಯಾರ್ಥಿನಿ ಶ್ರೇಯಾ ವೈಯಕ್ತಿಕ ಗೀತೆ ಹಾಡಿದರು. ಶಿಕ್ಷಕರಾದ ಲೀಲಾವತಿ ಮತ್ತು ಚಂದ್ರಶೇಖರ್ ಕ್ರೀಡೆ, ಶೈಕ್ಷಣಿಕ ಸಾಧಕರ ಪಟ್ಟಿ ವಾಚಿಸಿದರು. ಗೌತಮಿ ಸ್ಮರಣಸಂಚಿಕೆಯ ಬಗ್ಗೆ ತಿಳಿಸಿದರು. ಗೀತಾ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ಆಡಳಿತ ಮಂಡಳಿ ಸದಸ್ಯ ಶೇಖರ ನಾರಾವಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.