
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿ ಕು. ಪಲ್ಲವಿ ಕೊಡಗು ಜಿಲ್ಲೆಯ ಸಂತ್ರಸ್ತರ ನೋವಿಗೆ ಸ್ಪಂದಿಸುವ ಮೂಲಕ ಈಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ತನ್ನ ತಾತ, ಅಜ್ಜಿ, ಅತ್ತೆ, ಮಾವ ಹಿರಿಯರೆಲ್ಲ ನೀಡಿದ್ದ ಸುಮಾರು 1,102 ರೂ. ಹಣ (ಪಾಕೆಟ್ ಮನಿ)ವನ್ನು ಕೂಡಿಟ್ಟಿದ್ದ ಪಲ್ಲವಿ ಆ ಎಲ್ಲಾ ಹಣವನ್ನು ದೇಣಿಗೆಯಾಗಿ ನೀಡಿದ್ದಾಳೆ.
ಶಾಲೆಯಲ್ಲಿ ಶಿಕ್ಷಕರ ಮೂಲಕ ಕೊಡಗಿನ ಪ್ರಾಕೃತಿಕ ವಿಕೋಪಗಳ ಬಗ್ಗೆ ತಿಳಿದುಕೊಂಡಿದ್ದ ಪುಟಾಣಿಗೆ ಅವರ ಕಷ್ಟ, ನೋವುಗಳು ಮನ ಕಲುಕಿದ್ದು ತಾನು ಕೂಡಿಟ್ಟಿದ್ದ ಅಷ್ಟೂ ಹಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಡಾ.ಸುಧಾ ರಾವ್ ಇವರಿಗೆ ಹಸ್ತಾಂತರಿಸಿದಳು.
ಪಲ್ಲವಿ ನೀಡಿದ ನಾಣ್ಯಗಳ ಪೊಟ್ಟಣ ಸ್ವೀಕರಿಸಿದ ಡಾ. ಸುಧಾರಾವ್ ಮಾತನಾಡಿ ಈ ಶಾಲೆ ಮತ್ತು ಮನೆಯವರು ನೀಡಿದ ಸಂಸ್ಕಾರ ಸಾರ್ಥಕತೆಯನ್ನು ಸಾರುತ್ತಿದೆ ಎಂದರು ಮತ್ತು ಪಲ್ಲವಿ ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು. ಇವಳು ಶ್ರೀ ವೀರಭದ್ರಪ್ಪ ಮತ್ತು ಶ್ರೀಮತಿ ಶರಣಮ್ಮ ದಂಪತಿಗಳ ಪುತ್ರಿ.
