ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 23-6-2018 ರಿಂದ ಯಕ್ಷಗಾನದ ಹಿಮ್ಮೇಳ (ಭಾಗವತಿಕೆ, ಮದ್ದಳೆ) ಮತ್ತು ನಾಟ್ಯ ತರಗತಿಯ ಉದ್ಘಾಟನೆಯನ್ನು ಯುವ ಭಾಗವತರಾದ ಕು.ಕಾವ್ಯಶ್ರೀ ಅಜೇರುರವರು ಗುರುಗಳಾದ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಯವರ ಉಪಸ್ಥಿತಿಯಲ್ಲಿ ನೆರವೇರಿಸಿದರು. ಬಳಿಕ ಮಕ್ಕಳಿಗೆ ಸ್ಫೂರ್ತಿದಾಯಕ ಮಾತುಗಳಿಂದ ಕಲಿಕೆಗೆ ಪ್ರೇರಣೆ ನೀಡಿದರು. ಗುರುಗಳಾದ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಕಲಿಕೆಗೆ ಪೂರಕವಾದ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಉಮೇಶ್ ಮಿತ್ತಡ್ಕ ಇವರು ಮಾತನಾಡಿ ಕಲೆ ಜೀವನದ ಅವಿಭಾಜ್ಯ ಅಂಗ, ಅದನ್ನು ಉಸಿರಾಗಿ ಪಡೆದುಕೊಂಡವರಿಗೆ ಹಸಿರಾಗಿ ಬೆಳಕನ್ನು ನೀಡುತ್ತದೆ ಎಂದರು.


ಅಧ್ಯಕ್ಷರಾಗಿ ಶಾಲಾ ಸಂಚಾಲಕರಾದ ಶ್ರೀ ವಿನೋದ್ಕುಮಾರ್ ರೈ ಮಾತನಾಡಿ ಕಲಾ ಶ್ರೀಮಂತಿಕೆಯನ್ನು ಬೆಳೆಸಿಕೊಂಡವರು ಜನಮಾನಸರಾಗಿ ಬೆಳೆಯಲು ಸಾಧ್ಯ ಎಂದು ಹಾರೈಸಿದರು. ವೇದಿಕೆಯಲ್ಲಿ ನಾಟ್ಯಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಯಕ್ಷಚಿಣ್ಣರ ಬಳಗದ ಅಧ್ಯಕ್ಷರಾದ ಶ್ರೀ ಪದ್ಮನಾಭ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ವಸಂತ ಸುವರ್ಣ ಹಾಗೂ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆ, ಸ್ವಾಗತವನ್ನು ಯಕ್ಷ ಸಂಯೋಜಕ ಶ್ರೀ ಚಂದ್ರಶೇಖರ್ ಸುಳ್ಯಪದವು ನೆರವೇರಿಸಿದರು.