ಮಾತೃಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಗ್ರಾಮ ಗ್ರಾಮಗಳಲ್ಲಿ ’ಯೋಗ’ ಎಂಬ ಪರಿಕಲ್ಪನೆಯಡಿ ಶಾಲಾ ಯೋಗ ಶಿಕ್ಷಕರಿಗೆ ನೀಡಲಾದ ತರಬೇತಿಯನ್ನು ಶಾಲೆಗಳಲ್ಲಿ ನಡೆಸಿ ಮಕ್ಕಳು ಮತ್ತು ಶಿಕ್ಷಕರಿಂದ ಗ್ರಾಮಗಳಲ್ಲಿ ಯೋಗ ನಡೆಸುವುದೆಂದು ನಿರ್ಣಯಿಸಲಾದ ಹಿನ್ನೆಲೆಯಲ್ಲಿ ದಿನಾಂಕ 15-6-2018 ನೇ ಶುಕ್ರವಾರ ಸಂಜೆ 6.30 ಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಯೋಗ ಶಿಬಿರ ಆರಂಭಗೊಂಡಿತು. ಸುಮಾರು 50 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡರು. ದೇವರ ಭಜನೆಯೊಂದಿಗೆ ಆರಂಭಗೊಂಡ ಶಿಬಿರವು ಯೋಗ ಪ್ರವೇಶದೊಂದಿಗೆ ಮುಂದುವರಿಯಿತು.





ದಿನಾಂಕ 16-6-2018 ನೇ ಶನಿವಾರ ಮುಂಜಾನೆ 5.45 ರಿಂದ 7.45 ರವರೆಗೆ ಪ್ರಾಣಾಯಾಮ, ಯೋಗ ಅಭ್ಯಾಸಗಳನ್ನು ಶ್ರೀರಂಗಪ್ಪ ಶ್ರೀಮಾನ್ ಮತ್ತು ಗಣೇಶ ಶ್ರೀಮಾನ್ ನಡೆಸಿಕೊಟ್ಟರು. ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ಶ್ರೀ ವೆಂಕಟರಮಣ ಭಟ್ ಮಂಕುಡೆ ಇವರು ಆಗಮಿಸಿ ಆಸನ, ಧ್ಯಾನ, ಪ್ರಾಣಾಯಾಮದ ಮಹತ್ವ ತಿಳಿಸಿದರು. ಅನಂತರ ಶ್ರೀ ಸರಸ್ವತಿ ಮಾತೆಗೆ ಅರ್ಚನೆ ಮಾಡಿ ದೀಪ ಬೆಳಗಿಸಿ ದೇವರ ಸ್ತುತಿಗಳನ್ನು ಹಾಡಲಾಯಿತು.
ಪೂರ್ವಾಹ್ನ ಗಂಟೆ 10.30 ರಿಂದ ನಮ್ಮ ಶಾಲಾ ಹಿರಿಯ ವಿದ್ಯಾರ್ಥಿ ಪ್ರಸ್ತುತ ಉಜಿರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿರುವ ಕು. ಪ್ರಜ್ಞಾ ಪಿ.ಆರ್ ಇವರು ಮಕ್ಕಳಿಗೆ ಯೋಗ, ಪ್ರಾಣಾಯಮ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಯೋಗ ಮಂತ್ರ, ಯೋಗಗೀತೆಗಳನ್ನು ಹಾಡಿಸಲಾಯಿತು.
ಅಪರಾಹ್ನ 2 ಗಂಟೆಯಿಂದ ಸುಳ್ಯದ ವೈದ್ಯರಾದ ಡಾ||ಶಶಿಧರ್ ಹಸನಡ್ಕ(ಯೋಗ ಮತ್ತು ನ್ಯಾಚುರೋಪತಿ) ’ಯೋಗಾರೋಗ್ಯ’ದ ಬಗ್ಗೆ ಮಾತನಾಡುತ್ತಾ ಮನಸ್ಸಿನ ಏಕಾಗ್ರತೆಗೆ ’ಯೋಗ’ ಅತಿ ಮುಖ್ಯ. ಸಾಮಾಜಿಕ ಸಮತೋಲನ, ದೈಹಿಕ ಮಾನಸಿಕ ಮನೋಬಲಕ್ಕೆ ಮನಸ್ಸಿನ ಏರುಪೇರುಗಳಿಗೆ ಯೋಗ ದಿವ್ಯಔಷಧ ಎಂದ ಅವರು ನಮ್ಮ ಜೀವನದಲ್ಲಿ ನಿಜವಾದ ಗುರಿ ಇರಬೇಕು ಅದರಿಂದ ನಾವು ಮುಂದುವರಿಯಲು ಸಾಧ್ಯ ಎಂದರು. ಇವರು ಅಗ್ನಿಹೋತ್ರವನ್ನು ನಡೆಸುವ ಮೂಲಕ ಪರಿಸರ ಮತ್ತು ಮನಸ್ಸಿನ ಶುದ್ಧಿಗೆ ಅಗ್ನಿಹೋತ್ರದ ಮಹತ್ವವನ್ನು ತಿಳಿಸುತ್ತಾ ಮಕ್ಕಳಿಂದ ಅಗ್ನಿಹೋತ್ರದ ಮಂತ್ರವನ್ನು ಪುನರುಚ್ಚರಿಸುವಂತೆ ತಿಳಿಸಿದರು. ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘ ನಿರ್ದೇಶಿತ ಯೋಗ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಅವರು ಉಪಸ್ಥಿತರಿದ್ದರು.