ನಮ್ಮ ಭಾರತದೇಶದಲ್ಲಿ ಗುರುಗಳ ಮಹತ್ವವನ್ನು ಅರಿತು ಗೌರವಿಸುವ, ಅದರ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಭವ್ಯಪರಂಪರೆಯೇ ಇದೆ. ಪುರಾಣ ಪುರುಷರ ಮಹಾನ್ ಸಾಧಕರ ಸಾಧನೆಯ ಹಿಂದೆ ಉತ್ತಮ ಗುರುಗಳ ಮಾರ್ಗದರ್ಶನವನ್ನು ನಾವು ಕಾಣಬಹುದು. ಶೃಂಗೇರಿಯ ಶಾರಾದಾಪೀಠದ ಸ್ಥಾಪಕರಾದ ಶಂಕರಾಚಾರ್ಯರು ಆದರ್ಶ ಶಿಷ್ಯ ಕೋಟಿಯನ್ನು ಹೊಂದಿದ್ದು, ದೇಶದಾದ್ಯಂತ ಶಾಖಾಪೀಠಗಳ ಮೂಲಕ ಸಮಾಜದ ಜನರ ಸಂಸ್ಕಾರ ಸಂಸ್ಕೃತಿಗಳನ್ನು ಔನ್ನತ್ಯದೆಡೆಗೆ ಕೊಂಡೊಯ್ಯುವ ಸಾರ್ಥಕ ಕಾರ್ಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿವೇಕಾನಂದ ಸಂಸ್ಥೆಯು ಗುರುಗಳನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ ಎಂದು ಕೋಟೆಕಾರಿನ ಶೃಂಗೇರಿ ಶಾರದಾ ಪೀಠದ ಶಾಖೆಯ ಧರ್ಮದರ್ಶಿಗಳಾದ ಸತ್ಯಪ್ರಕಾಶ ಬೊಳ್ಳಾವರರವರು ಹಿರಿಯ ಶಿಕ್ಷಕರಿಗೆ ಗೌರವಾರ್ಪಣೆ ನಡೆಸಿ ಆಶೀರ್ವದಿಸುತ್ತಾ ಈ ಮೇಲಿನ ಮಾತುಗಳನ್ನಾಡಿದರು.






ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ್ ನಾಯಕ್ ನಿಸರ್ಗದ ಪ್ರತಿಯೊಂದು ಅಂಶವು ನಮಗೆ ಗುರುವಿನಂತೆ ಬೇರೆ ಬೇರೆ ಸಂದರ್ಭಗಳಲ್ಲಿ ತಿಳುವಳಿಕೆ ನೀಡುತ್ತದೆ. ಒಂದಕ್ಷರ ಕಲಿಸಿದರೂ ಆತ ನಮಗೆ ಗುರು. ಗುರುಗಳಿಗೆ ಶರಣು ಬರದ ಹೊರತು ನಮಗೆ ಮುಕ್ತಿಯಿಲ್ಲ ಎಂಬ ದಾಸರವಾಣಿಯನ್ನು ಉಲ್ಲೇಖಿಸುತ್ತಾ ಗುರುಗಳ ಶ್ರೇಷ್ಠತೆಯನ್ನು ತಮ್ಮ ಮಾತುಗಳಲ್ಲಿ ವರ್ಣಿಸಿದರು.
ಈ ಸಂದರ್ಭದಲ್ಲಿ ಶಾಲಾ ಪೋಷಕರು ಎಲ್ಲಾ ಗುರುಗಳಿಗೆ ಆರತಿ ಬೆಳಗಿ, ಫಲಪುಷ್ಫವನ್ನಿತ್ತು, ಹಿರಿಯ ಶಿಕ್ಷಕರಿಗೆ ಗೌರವಾರ್ಪಣೆ ಮಾಡುವುದರ ಮೂಲಕ ತುಂಬಾ ಆತ್ಮೀಯವಾಗಿ ಆಚರಿಸಲ್ಪಟ್ಟಿತು. ಪ್ರೌಢಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಮಾತಾಜಿ ಕಾರ್ಯಕ್ರಮದ ಕುರಿತು ಮಾತಾನಾಡಿದರು. ಗೌರವಾರ್ಪಣೆ ಸ್ವೀಕರಿಸಿದ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಯುತ್ ನಾಯಕ್ ಸ್ವಾಗತಿಸಿ, ಸಂಚಾಲಕರಾದ ವಿನೋದ್ ಕುಮಾರ್ ರೈ, ಗುತ್ತು ವಂದಿಸಿದರು. ಶಾಲಾ ಪೋಷಕರಾದ ಶ್ರೀಮತಿ ಪೂರ್ಣಿಮಾ ನಿಡ್ವಣ್ಣಾಯ ಕಾರ್ಯಕ್ರಮ ನಿರೂಪಿಸಿದರು.