’ಸಮಾಜದ ಹಿರಿಯರು ಉನ್ನತ ಉದ್ಯೋಗವನ್ನು ಪಡೆದು ಹೆಚ್ಚಿನ ಸಾಧನೆಗೈಯಲು ಅವರಿಗೆ ಕನ್ನಡ ಮಾಧ್ಯಮ ಶಿಕ್ಷಣವೇ ತಳಹದಿಯಾಗಿತ್ತು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರು ಇಂದು ಜಗತ್ತಿನ ನಾನಾ ಸ್ಥಳಗಳಲ್ಲಿ ಮಿಂಚುತ್ತಿದ್ದಾರೆ. ಮಾತೃ ಸಂಸ್ಕೃತಿಯ ಶಿಕ್ಷಣ ಪಡೆದ ನೀವು ಧನ್ಯರು. ಇದರ ಋಣವನ್ನು ಎಂದೂ ಮರೆಯಬಾರದು ಹಾಗೂ ಶಾಲೆಯ ಉನ್ನತಿಗಾಗಿ ಸಹಕರಿಸಬೇಕು’ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಪದವಿ ವಿದ್ಯಾಲಯದ ಉಪನ್ಯಾಸಕಿ ಹರಿಣಿ ಪುತ್ತೂರಾಯ ನುಡಿದರು.



ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ ನಾಯಕ್ ಮಾತನಾಡಿ ’ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದ ವ್ಯಕ್ತಿ ಎಷ್ಟು ಎತ್ತರಕ್ಕೂ ಏರಬಹುದು. ಮಾತೃಭೂಮಿ ಮತ್ತು ತಾಯಿಯ ಮಡಿಲು ಸ್ವರ್ಗಕ್ಕಿಂತ ಮಿಗಿಲಾದುದು. ಶ್ರೀರಾಮಚಂದ್ರನ ಉಕ್ತಿಯಂತೆ ಮಾತೃಭಾಷೆಯೂ ಅಷ್ಟೇ ಮಹತ್ವ ಉಳ್ಳದ್ದು. ಭಾರತೀಯ ಸಂಸ್ಕಾರ ಈ ಶಾಲೆಯಿಂದ ನಿಮಗೆ ದೊರಕಿದೆ ಎಂಬುದು ನಮ್ಮ ವಿಶ್ವಾಸ. ಅದನ್ನು ಸಾಕಾರಗೊಳಿಸುವುದು ವಿದ್ಯಾರ್ಥಿಗಳಾದ ನಿಮ್ಮ ಕರ್ತವ್ಯ. ಇದನ್ನು ಉಳಿಸಿ ಬೆಳೆಸಿ ಇನ್ನಷ್ಟು ವೃದ್ಧಿ ಮಾಡುವ ಕೆಲಸ ನಿಮ್ಮದಾಗಬೇಕು’ ಎಂದು ನುಡಿದರು.


ಮುಖ್ಯಗುರು ಶ್ರೀಮತಿ ಆಶಾ ಬೆಳ್ಳಾರೆ ವಿದ್ಯಾರ್ಥಿಗಳಿಗೆ ಅಭಿನಂದನಾ ಮಾತುಗಳನ್ನಾಡಿದರು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ವಿನೋದ್ ಕುಮಾರ್ ರೈ ಉಪಸ್ಥಿತರಿದ್ದರು. ರಂಗಪ್ಪ ಶ್ರೀಮಾನ್ ಪ್ರಾರ್ಥಿಸಿ, ಶ್ರೀಮತಿ ರೇಶ್ಮಾ ಮಾತಾಜಿ ಸ್ವಾಗತಿಸಿದರು. ಶ್ರೀಮತಿ ಲಾವಣ್ಯ ಮಾತಾಜಿ ಅಭಿನಂದನಾ ಪತ್ರ ವಾಚಿಸಿದರು. ಶ್ರೀಮತಿ ದಾಕ್ಷಾಯಿಣಿ ಮಾತಾಜಿ ವಂದಿಸಿ, ಶ್ರೀಮತಿ ರೇವತಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.