ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 28-06-2016 ರಂದು 8 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಾದ ಶ್ರೀ ರಘುರಾಜ ಉಬರಡ್ಕರವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಮಾತೃ ಭಾಷೆಯಲ್ಲಿ ಕಲಿಕೆ ಉನ್ನತ ಶಿಕ್ಷಣಕ್ಕೆ ಎಂದೂ ತೊಡಕಾಗುವುದಿಲ್ಲ ಮತ್ತು ಮಾತೃಭಾಷೆಯಲ್ಲಿ ಕಲಿತ ಮಗು ಸರ್ವಾಂಗೀಣವಾಗಿ ಪ್ರಗತಿ ಹೊಂದುವುದಲ್ಲದೇ ಎಲ್ಲಾ ಮೌಲ್ಯಗಳನ್ನು ಅಂತರ್ಗತ ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯರವರು ಮಾತನಾಡಿ, ಕನ್ನಡ ಮಾಧ್ಯಮ ಕಲಿಕೆಯಿಂದ ಸೃಜನಶೀಲ ಚಟುವಟಿಕೆಗಳು ಉತ್ತೇಜನಗೊಳ್ಳುತ್ತದೆ ಮತ್ತು ಅದಕ್ಕೆ ಪೂರಕವೆಂಬಂತೆ ಇಲ್ಲಿನ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದು ನುಡಿದರು. ಸಭೆಯಲ್ಲಿ ಪೋಷಕರ ವತಿಯಿಂದ ಆಯ್ದ ಪೋಷಕರನ್ನು ಆಯ್ಕೆಮಾಡಲಾಯಿತು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ರೂಪಲೇಖ, ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀಮತಿ ನಳಿನಿ ವಾಗ್ಲೆ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಚಂದ್ರಶೇಖರ ಸುಳ್ಯಪದವುರವರು ನೆರವೇರಿಸಿದರು.



