ಮಾತೃ ಭಾಷಾ ಶಿಕ್ಷಣವು ಮಗುವಿನಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸಿ, ಜೀವನ್ಮುಖಿಯಾಗುವಂತೆ ಮಾಡುತ್ತದೆ. ಮಗು ಸಂಸ್ಕಾರವಂತನಾಗಿ ಬೆಳೆಯಬೇಕಾದರೆ; ಮನೆ, ಶಾಲೆ, ಹಾಗೂ ಸಮಾಜದಲ್ಲಿಗುಣಾತ್ಮಕವಾದ ಪೂರಕ ವಾತಾವರಣವಿರಬೇಕು. ನಾವು ಯಶಸ್ಸಿನ ಗುಟ್ಟನ್ನು ತಿಳಿಯಬೇಕಾದರೆ ಸೋತವರಿಂದ ಗೆಲುವಿನ ಪಾಠವನ್ನು, ಗೆದ್ದವರಿಂದ ಗೆಲುವಿನ ಅನುಭವವನ್ನು ಆಲಿಸಬೇಕು ಎಂದು ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀ ರಾಕೇಶ್ಕುಮಾರ್ ಕಮ್ಮಾಜೆ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರವೇಶೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.








ಯಶಸ್ವಿ ಜೀವನಕ್ಕೆ ಅವಶ್ಯಕವಾದ ಜೀವನ ಕೌಶಲವನ್ನು ಕಲಿಸುವಂತಹ ಶಿಕ್ಷಣವು ದೊರೆತಾಗ ಕಲಿಕೆಯು ಆನಂದದಾಯಕವಾಗುತ್ತದೆ. ಹೀಗೆಂದು ಪ್ರಾಸ್ತಾವಿಕವಾಗಿ ಮಾತನಾಡಿದವರು, ಕಡಬ ಸರಸ್ವತೀ ವಿದ್ಯಾಲಯದ ಸಂಚಾಲಕರಾದ ವೆಂಕಟರಮಣರಾವ್ ಮಂಕುಡೆಯವರು.
ಅಧ್ಯಕ್ಷೀಯ ನೆಲೆಯಲ್ಲಿ ಶಾಲಾ ಪೋಷಕರೂ ಆಗಿರುವ ಶ್ರೀಯುತ ಯು.ಜಿ ರಾಧಾರವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ದಾಖಲಿಸಿದ ಪೋಷಕರನ್ನು ಅಭಿನಂದಿಸಿದರು. ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ಸಂಚಾಲಕರಾದ ರವೀಂದ್ರ ಪಿ. ಯವರು ಶುಭನುಡಿಗಳನ್ನಾಡಿದರು.
ಮಂತ್ರಘೋಷದ ಜೊತೆಗೆ ವಿದ್ಯಾರ್ಥಿಗಳು ಅಗ್ನಿಗೆ ಘೃತಾಹುತಿಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿರಿಯ ಮಾತಾಜಿ ವೃಂದದವರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ತಿಲಕವಿರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪೋಷಕರು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆಯನ್ನು ನೀಡಿದರು.
ವೇದಿಕೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಅಚ್ಚುತ ನಾಯಕ್, ಶ್ರೀಮತಿ ರೂಪಲೇಖ ಪಾಣಾಜೆ ಹಾಗೂ ಮುಖ್ಯ ಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಶ್ರೀಮತಿ ನಳಿನಿ ವಾಗ್ಳೆ ಮಾತಾಜಿಯವರು ಉಪಸ್ಥಿತರಿದ್ದರು.
ಕೀರ್ತಿಕುಡ್ವ ಪ್ರಾರ್ಥಿಸಿ, ಕು.ಅರ್ಪಿತಾ ವೈಯಕ್ತಿಕ ಗೀತೆ ಹಾಡಿದರು. ಶ್ರೀಮತಿ ರೇಷ್ಮಾ ಮಾತಾಜಿ ಸ್ವಾಗತಿಸಿ, ಕು.ಉಮಾ ಮಾತಾಜಿ ವಂದಿಸಿದರು. ಶ್ರೀಮತಿ ಅನುಷಾ ಮಾತಾಜಿ ಕಾರ್ಯಕಮ ನಿರೂಪಿಸಿದರು.