ನಮ್ಮ ಮಾತೃ ಭಾಷೆ ಕನ್ನಡ ಅತ್ಯಂತ ಸುಂದರವಾದದ್ದು, ವೈಜ್ಞಾನಿಕವಾಗಿ ವ್ಯವಸ್ಥಿತವಾದ ಲಿಪಿಯಿಂದ ಕೂಡಿದೆ. ಆದ್ದರಿಂದ ದೇಶಿಯ ಭಾಷೆಯಲ್ಲಿ ಧರ್ಮಯೋಗ್ಯವಾದ, ಜೀವನ ಮೌಲ್ಯಗಳನ್ನು ತಿಳಿಸಿಕೊಡುವಂತಹ ಶಿಕ್ಷಣವನ್ನು ಇಂದಿನ ವಿದ್ಯಾರ್ಥಿಗಳು ಪಡೆಯಬೇಕಾಗಿದೆ. ಅರ್ಥ ಮತ್ತು ಕಾಮಗಳನ್ನು ಧರ್ಮದಿಂದ ಅನುಷ್ಠಾನ ಮಾಡಿದಾಗ ಮೋಕ್ಷ ಸಾಧನೆಯಾಗುತ್ತದೆ. ಇದು ಗುಣಾತ್ಮಕ ಶಿಕ್ಷಣದಿಂದ ಸಾಧ್ಯವಾಗುತ್ತದೆ ಎಂದು ಅಖಿಲಭಾರತೀಯ ಕುಟುಂಬ ಪ್ರಬೋಧನಾ ಪ್ರಮುಖರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2015-16 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಿದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಶುಭ ಹಾರೈಸಿದರು.





ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಕೃಷ್ಣ ಭಟ್ ಕೊಂಕೋಡಿ ಇವರು ವಿದ್ಯಾರ್ಥಿಗಳ ಕರ್ತವ್ಯವನ್ನು ಎಚ್ಚರಿಸುತ್ತಾ, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕಿವಿಮಾತನ್ನು ಹೇಳುತ್ತ ವಿದ್ಯಾರ್ಥಿಗಳ ಉತ್ತಮ ಸಾಧನೆಯನ್ನು ಪ್ರಶಂಸಿಸಿದರು. ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಸಾಧಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ನಲ್ಲಿ ರಾಷ್ಟ್ರಪತಿ ಪುರಸ್ಕಾರ ಪಡೆದು, ದ್ವಿತೀಯ ಪಿ.ಯು.ಸಿ ಜೆ.ಇ.ಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಪಡೆದ ಶಾಲಾ ಹಿರಿಯ ವಿದ್ಯಾರ್ಥಿಯಾದ ಚಂದನ್ ಇವರನ್ನು ಸನ್ಮಾನಿಸಲಾಯಿತು. ಕು. ಲೀಲಾವತಿ ಮಾತಾಜಿ ಸನ್ಮಾನಿತರ ಸಾಧನೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿನಿ ಕು. ಕೀರ್ತಿ ಕುಡ್ವ ವೈಯಕ್ತಿಕ ಗೀತೆ ಹಾಡಿದರು. ಪರೀಕ್ಷೆಗೆ ಹಾಜರಾದ 135 ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಪಿ. ರವೀಂದ್ರ, ಸದಸ್ಯೆ ಶ್ರೀಮತಿ ಶೋಭಾ ಕೊಳತ್ತಾಯ, ಪ್ರೌಢ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು.ಅರ್ಪಿತಾ ಪ್ರಾರ್ಥಿಸಿ, ಶ್ರೀಮತಿ ಪೂರ್ಣಿಮಾ ಮಾತಾಜಿ ಸ್ವಾಗತಿಸಿದರು. ಶ್ರೀಮತಿ ಉಮಾ ಮಾತಾಜಿ ಧನ್ಯವಾದ ಸಮರ್ಪಿಸಿ ಕು. ನಿಶ್ಚಿತಾ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು.