ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಶ್ರಯದಲ್ಲಿ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ) ಸಾಧನಾ ಸಂಗೀತ ಶಾಲೆ ಹಾಗೂ ತೆಂಕಿಲ ಯಕ್ಷ ಚಿಣ್ಣರ ಬಳಗದ ಸಹಯೋಗದೊಂದಿಗೆ ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ವಠಾರದಲ್ಲಿಗಾನ – ನೃತ್ಯ- ಯಕ್ಷ ಸಂಭ್ರಮ- 2016 ಕಾರ್ಯಕ್ರಮ ನಡೆಯಿತು.




ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀಧರ ಮಯ್ಯ ಕಾರ್ಯಕ್ರಮದ ದೀಪ ಪ್ರಜ್ವಲನೆಗೈದು ಪ್ರತಿಭೆಗಳನ್ನು ಗುರುತಿಸಿ ಸೂಕ್ತವಾದ ತರಬೇತಿಯನ್ನು ನೀಡಿ ಸಮರ್ಥವಾದ ವೇದಿಕೆಯನ್ನು ಒದಗಿಸುವಲ್ಲಿ ಸಂಸ್ಥೆಯ ಕಾರ್ಯ ಅಭಿನಂದನಾರ್ಹವಾದುದು ಈ ಪ್ರತಿಭೆಗಳಿಗೆ ಭವಿಷ್ಯ ಉತ್ತಮವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾದ ಮಂಗಳೂರು ನಾಟ್ಯರಾಧನ ಹಾಗೂ ಯಕ್ಷರಾಧನ ಕಲಾಕೇಂದ್ರದ ಪ್ರಧಾನ ಟ್ರಸ್ಟಿ ಶ್ರೀಮತಿ ಸುಮಂಗಲಾ ರತ್ನಾಕರ್ಇವರು ಭಾರತೀಯ ಕಲೆ ಹಾಗೂ ಸಂಸ್ಕೃತಿಯು ಪ್ರಾಚೀನವಾದುದು ಮಗುವಿನ ಪರಿಪೂರ್ಣ ಬೆಳವಣಿಗೆಯಲ್ಲಿ ನೃತ್ಯ, ಸಂಗೀತ ಯಕ್ಷಗಾನ ಕಲಿಕೆಗಳ ಕೊಡುಗೆ ಅಪೂರ್ವವಾದುದು. ಇದರೊಂದಿಗೆ ಉತ್ತಮ ಸಮಾಜದ ನಿರ್ಮಿತಿ ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ.ಕೃಷ್ಣಭಟ್ ಕೊಂಕೋಡಿ ಉತ್ತಮವಾದ ಕಾರ್ಯಕ್ರಮ ಸಂಘಟಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಸಂಸ್ಥೆಯು ಮುಂದೆಯೂ ಯಶಸ್ವಿ ಕಾರ್ಯಕ್ರಮವನ್ನು ಸಂಘಟಿಸಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಭರತನಾಟ್ಯ, ಗಾಯನ, ಯಕ್ಷಗಾನ ಸಲಹಾ ಸಮಿತಿಯ ಅಧ್ಯಕ್ಷರಾದ ಶಂಕರ ಭಟ್, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ನಳಿನಿ ವಾಗ್ಲೆ, ಸಂಗೀತ ಗುರುಗಳಾದ ವಿದುಷಿ ಸುಚಿತ್ರಾ ಹೊಳ್ಳ, ನೃತ್ಯ ಗುರುಗಳಾದ ವಿದ್ವಾನ್ ದೀಪಕ್ಕುಮಾರ್, ಯಕ್ಷಗಾನ ಗುರುಗಳಾದ ಬಾಲಕೃಷ್ಣ ಉಡ್ಡಂಗಳ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿ ಕೀರ್ತಿಕುಡ್ವ ಪ್ರಾರ್ಥಿಸಿ, ಶಂಕರ್ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕಿ ಅನುಷಾ ವಂದಿಸಿ ಪೋಷಕರಾದ ಸವಿತಾ ಆಚಳ್ಳಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಗಾನಸಿಂಚನ, ಸಂಗೀತ ಕಾರ್ಯಕ್ರಮ, ಭರತನಾಟ್ಯ, ಲಘುಶಾಸ್ತ್ರೀಯ ನೃತ್ಯಗಳನ್ನೊಳಗೊಂಡ ನೃತ್ಯ ವೈಭವ ಸುರಧೇನು ನಂದಿನಿ ಎಂಬ ಯಕ್ಷಗಾನ ಪ್ರಸಂಗವು ಪ್ರದರ್ಶಿಸಲ್ಪಟ್ಟಿತು.