ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವುದು ನಾಣ್ಣುಡಿ. ವಿವೇಕಾನಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೋಶ ಓದುವುದರ ಮೂಲಕ ದೇಶ ವಿದೇಶಗಳ ಪರಿಸರ ವಿಶೇಷಗಳ ಅರಿಯುವಿಕೆಗೆ ಸುಜ್ಞಾನ -ಓದುವ ಯಜ್ಞ ಉತ್ತಮ ವೇದಿಕೆ ಕಲ್ಪಿಸಿತು. ಅಕ್ಟೋಬರ್ 8 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸುಜ್ಞಾನ – ಓದುವ ಯಜ್ಞ ನಡೆಯಿತು. ಮಕ್ಕಳಲ್ಲಿ ವಾಚನಾಸಕ್ತಿ ಬೆಳೆಸುವ ಉದ್ದೇಶಕ್ಕಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಗುವಿನ ಜ್ಞಾನದ ರಚನೆಯಲ್ಲಾಗುವ ಧನಾತ್ಮಕ ಬೆಳವಣಿಗೆಗೆ ವಾಚನಾಸಕ್ತಿ ಪ್ರಮುಖ ಸಾಧನವೆಂದು ಕೊಂಡು ಶಿಕ್ಷಕ – ರಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಸಹೃದಯಿ ಪೋಷಕರ ಸಹಕಾರದೊಂದಿಗೆ ಆರಂಭವಾದುದೇ ವಿವೇಕತರಗತಿ ಗ್ರಂಥಾಲಯ ಇದರ ಸಹಯೋಗ ಕಾರ್ಯಕ್ರಮವೇ ಸುಜ್ಞಾನ – ಓದುವ ಯಜ್ಞ. ಇದರಲ್ಲಿ ಭಾಗವಹಿಸಿದ ಶಾಲಾ ಮಕ್ಕಳು ಸುಜ್ಞಾನ ದೀವಿಗೆಯನ್ನು ಬೆಳಗಿಸಿ ಓದುವ ಯಜ್ಞಕ್ಕೆ ಚಾಲನೆ ನೀಡಿದರು.

ಮಗುವು ತಾನು ತಂದ ಪುಸ್ತಕವನ್ನು ಸರಸ್ವತಿಗೆ ಸಮರ್ಪಿಸಿ ಹೂವಿನ ಅರ್ಚನೆ ಮಾಡಿ ಸರಸ್ವತಿಯ ಆಶೀರ್ವಾದದೊಂದಿಗೆ ಓದುವ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿದರು. ಮಕ್ಕಳು ದಿನಕ್ಕೊಂದು ಕಥೆ, ರಾಮಾಯಣ, ಮಹಾಭಾರತ, ಅಜ್ಜಿಕಥೆಗಳು, ನುಡಿಮುತ್ತುಗಳು, ರಸಪ್ರಶ್ನೆಗಳು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ, ಮುಂತಾದ ಹಲವು ಪುಸ್ತಕಗಳನ್ನು ಸಮರ್ಪಿಸಿದರು. ಶಿಕ್ಷಕರಾದ ರಾಜೇಶ್ ಪಿ.ಬಿ ಮತ್ತು ಹರೀಶ್ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.