ತೆಂಕಿಲ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಮೇಳ ಮಾ. 14 ರಂದು ನಡೆಯಿತು. ಗ್ರಾಮೀಣ ಸೊಗಡಿನ ಆಟಗಳಾದ ಜಾರುಬಂಡಿ, ಸೇತುವೆ ದಾಟುವುದು, ದೋಣಿ ಆಟ, ಚಕ್ರದಾಟ, ಜೋಕಾಲಿ, ಗಾಳಿಪಟ ಹಾರಿಸುವುದು, ಚಿತ್ರ ಬಿಡಿಸುವುದು, ಕಥೆ ಹೇಳುವುದು, ಅಭಿನಯ ಗೀತೆ, ಮುಖವಾಡ, ಚಿತ್ರಕ್ಕೆ ಬಣ್ಣ ಹಾಕುವುದು, ಹಾಳೆಯಾಟ ಮುಂತಾದ 15 ಕ್ಕೂ ಮಿಕ್ಕಿ ಆಟಗಳಲ್ಲಿ ಸುಮಾರು 1700 ಮಕ್ಕಳು 4 ಗಂಟೆಗಳ ಕಾಲ ಬಿಸಿಲ ಧಗೆಯನ್ನು ಲೆಕ್ಕಿಸದೆ ಭಾಗವಹಿಸಿದ್ದರು.



ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಂ.ಕೃಷ್ಣ ಭಟ್, ಪುಟಾಣಿ ಮಕ್ಕಳ ಕೈಯಲ್ಲಿ ಬೆಲೂನ್ ಹಾರಿ ಬಿಡುವ ಮೂಲಕ ಕಾರ್ಯಕ್ರಮ ಉದ್ಫಾಟಿಸಿದರು. ಶಾಲಾ ಸಂಚಾಲಕರಾದ ರವೀಂದ್ರ.ಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುತ್ತೂರು ಪರಿಸರದ ಮುದ್ದು ಕಂದಮ್ಮಗಳಿಗೆ ಒಂದೇ ಸೂರಿನಡಿ ಅವರ ಅಭಿರುಚಿಗೆ ತಕ್ಕಂತಹ ಚಟುವಟಿಕೆ ಹಮ್ಮಿಕೊಳ್ಳುವುದು ನಮ್ಮ ಉದ್ದೇಶ ಎಂದರು. ಉಲ್ಲಾಸಣ್ಣ ಗೀತೆ, ಕಥೆ ಹೇಳುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಚಿಣ್ಣರ ಮೇಳದಲ್ಲಿ ಸಂಸ್ಥೆಯ ಕನ್ನಡ ಮಾಧ್ಯಮ ಶಾಲಾ ಮುಖ್ಯಗುರು ಶ್ರೀಮತಿ ಆಶಾಬೆಳ್ಳಾರೆ, ಆಂಗ್ಲಮಾಧ್ಯಮ ಶಾಲಾ ಮುಖ್ಯ ಗುರು ಸತೀಶ್ ಕುಮಾರ್ ರೈ, ಆಡಳಿತ ಮಂಡಳಿಯ ಕೋಶಾಧಿಕಾರಿ ಅಚ್ಚುತ ನಾಯಕ್, ಡಾ.ಸುಲೇಖ ವರದರಾಜ್ ಉಪಸ್ಥಿತರಿದ್ದರು. ಚಿಣ್ಣರ ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಹಾರ, ಜ್ಯೂಸ್, ಹಣ್ಣುಹಂಪಲು, ಐಸ್ ಕ್ರೀಮ್ ಮತ್ತು ಪ್ರಮಾಣ ಪತ್ರದ ವ್ಯವಸ್ಥೆಯನ್ನು ಆಡಳಿತ ಮಂಡಳಿಯ ವತಿಯಿಂದ ಮಾಡಲಾಗಿತ್ತು. ಆಟಗಳಲ್ಲಿ ಪಾಲ್ಗೊಂಡ ಎಲ್ಲಾ ಕಂದಮ್ಮಗಳಿಗೆ ಬಣ್ಣದ ಪೆನ್ಸಿಲ್, ಗಿರಿಗಿಟಿ, ಗಾಳಿಪಟಗಳು, ಬಲೂನ್ ಗಳನ್ನು ಹಂಚಲಾಯಿತು.