ಮಾನವನ ಜೀವನಕ್ಕೆ ಪೂರಕವಾದ ಮೂಲಭೂತ ಸೌಲಭ್ಯಗಳು ಅಗತ್ಯವಿರುವಂತೆ ಕಾನೂನಿನ ತಿಳುವಳಿಕೆ ಹೊಂದಿರುವುದು ಅತೀ ಅವಶ್ಯಕ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಯಾದವ ವನಮಾಲ ಆನಂದರಾವ್ ತಿಳಿಸಿದರು.
ಕಾನೂನು ಸೇವಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ವಕೀಲರ ಸಂಘ, ಅನಿಕೇತನ ಎಜ್ಯುಕೇಶನಲ್ ಟ್ರಸ್ಟ್ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ. 28 ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಕಾರ್ಯಾಗಾರ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಉದ್ಫಾಟಿಸಿ ಅವರು ಮಾತನಾಡಿದರು. ಮಾನವ ಸಂಘಜೀವಿ. ಅವನು ಒಬ್ಬಂಟಿಯಾಗಿ ಜೀವಿಸಲು ಸಾಧ್ಯವಿಲ್ಲ. ಪರಸ್ಪರ ಸಹಕಾರ ಮನೋಭಾವದಿಂದ ಪರಿಸರದ ಜೊತೆಗೆ ಹೊಂದಿಕೊಂಡು ಜೀವಿಸಬೇಕಾದರೆ ಅವನಿಗೆ ನಿತ್ಯ ಜೀವನಕ್ಕೆ ಜೈವಿಕ ಅಂಶಗಳಷ್ಟೆ ಕಾನೂನು ಬಗ್ಗೆ ಅರಿತುಕೊಳ್ಳುವುದು ಅತೀ ಅಗತ್ಯ, ಈ ನಿಟ್ಟಿನಲ್ಲಿ ಪ್ರಬುದ್ಧತೆಯಲ್ಲಿರುವ ಮಕ್ಕಳಿಗೆ ಕಾನೂನಿನ ಜ್ಞಾನವನ್ನು ನೀಡುವುದು ಮುಖ್ಯ ಎಂದು ಅವರು ಸಾಮಾನ್ಯ ಕಾನೂನಿನ ಜ್ಞಾನ ಪಡೆದ ಅವರು ಮುಂದೆ ಸಮಾಜದಲ್ಲಿ ನಡೆಯುವ ಆಗುಹೋಗುಗಳಲ್ಲಿ ಕೆಟ್ಟದ್ದು ಮತ್ತು ಒಳ್ಳೆಯದನ್ನು ನ್ಯಾಯಯುತವಾಗಿ ಅರಿತುಕೊಂಡು ಜೀವಿಸಲು ಸಾಧ್ಯ ಎಂದರಲ್ಲದೆ ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಕಾನೂನು ಮಾಹಿತಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಕಾನೂನು ಮಾಹಿತಿಯನ್ನು ಪಡೆದುಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ದೇವಾನಂದ ಕೆ. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಿ.ಕೆ. ಬಸವರಾಜ್, ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ವಿ.ನಾಗರಾಜ್, ಪ್ರಧಾನ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿಯಾದ ಪ್ರೀತ ಜೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯ್, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಂಜುನಾಥ ಎನ್.ಎಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಂಜುನಾಥ ಎನ್.ಎಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎ. ಉದಯಶಂಕರ್ ಶೆಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕಿ ಕೃಷ್ಣಮ್ಮ, ಮುಖ್ಯಗುರು ಆಶಾ ಬೆಳ್ಳಾರೆ, ವಕೀಲರ ಸಂಘದ ಖಜಾಂಚಿ ಮೋನಪ್ಪ, ಜತೆ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ಅಜಿತ್ ಸ್ವಾಗತಿಸಿದರು, ಅನಿಕೇತನ ಎಜ್ಯುಕೇಶನಲ್ ಟ್ರಸ್ಟ್ನ ಆಡಳಿತ ನಿರ್ದೇಶಕ ಕೃಷ್ಣ ಪ್ರಸಾದ್ ನಡ್ಸಾರ್ ಪ್ರಾಸ್ತಾವಿಕವಾಗಿ ಮಾತನಾಡೀದರು. ಶಿಕ್ಷಕರಾದ ರುಕ್ಮಯ್ಯ ಹಾಗೂ ವಿಶ್ವನಾಥ, ವಿದ್ಯಾರ್ಥಿಗಳಾದ ಅಶ್ವಿನಿ, ಶ್ವೇತಾ, ವರಶ್ರೀ, ಪ್ರೀತಿ, ಸಂಗೀತ, ಲಕ್ಷ್ಮೀ, ಕಾವ್ಯರತ್ನ, ಚಂದನ, ವರುಣ್ ಕುಮಾರ್, ಸುಷ್ಮಾ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿ, ವಕೀಲರ ಸಂಘದ ಕಾರ್ಯದರ್ಶಿ ಜಗನ್ನಾಥ ರೈ ವಂದಿಸಿದರು. ನ್ಯಾಯಾಂಗ ಇಲಾಖೆಯ ರಂಗಪ್ಪ ಸಹಕರಿಸಿದರು. ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ಬಂದ ೧೦೮ ವಿದ್ಯಾರ್ಥಿಗಳು ಮಾಹಿತಿ ಕಾರ್ಯಾಗಾರ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉದಯ ವಿಟ್ಲ ಮತ್ತು ಬಳಗ ತೀರ್ಪುಗಾರರಾಗಿ ಸಹಕರಿಸಿದರು.