ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಗಾಂಧಿಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಮಕ್ಕಳ ಸಾಹಿತಿ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಇವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಗಾಂಧೀಜಿ ಮತ್ತು ಶಾಸ್ತ್ರಿಗಳ ವಿಚಾರಗಳು ನಮಗೆ ಸ್ಫೂರ್ತಿದಾಯಕವಾಗಲಿ ಎಂದರು. ಮತ್ತು ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರವರ ವಿದ್ಯಾರ್ಥಿಗಳೊಂದಿಗಿನ ಅವಿನಾಭಾವ ಸಂಬಂಧವನ್ನು ನೆನಪಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ ನಾಯಕ್ ಮಾತಾನಾಡಿ ಪರರ ಹಿತಕ್ಕಾಗಿ, ಏಳಿಗೆಗಾಗಿ ಅವಿರತ ಶ್ರಮಿಸಿದ ಮಹಾತ್ಮ ಗಾಂಧೀಜಿ ಮತ್ತು ಲಾಲ್ಬಹದ್ದೂರ್ ಶಾಸ್ತ್ರಿಯವರು ಬಾಳಿದ ರೀತಿ ಇತರರಿಗೆ ಮಾದರಿಯಾಗಿದೆ. ಗಾಂಧಿ ಕಂಡಂತಹ ಸ್ವಚ್ಛ, ಸಮೃದ್ಧ ಭಾರತದ ಕನಸು ನನಸಾಗಲು ನಾವೆಲ್ಲರೂ ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಾಗೂ ಶುದ್ಧ ತನು-ಮನ, ಸ್ವಚ್ಛ ಪರಿಸರವಿದ್ದಾಗ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ವಿನೋದ್ ಕುಮಾರ್ ರೈ, ಗುತ್ತು ಬೆಟ್ಟಂಪಾಡಿ, ಸದಸ್ಯರಾದ ವಸಂತ ಸುವರ್ಣ ಹಾಗೂ ಶಿಕ್ಷಕ – ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಇವರುಗಳ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಶ್ರೀ ರಂಗಪ್ಪ ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಕವಿತಾ ಮಾತಾಜಿ ಧನ್ಯವಾದ ಸಮರ್ಪಿಸಿದರು.