ಭಾರತೀಯತೆಗೆ ಸನಾತನ ಧರ್ಮವೇ ತಳಹದಿ – ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ
ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರಂತಹ ಸಾಧಕರು ಭಾರತದ ಸಂಸ್ಕಾರ, ಧರ್ಮದ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಸನಾತನ ಧರ್ಮವೇ ನಮ್ಮೆಲ್ಲಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಏಳಿಗೆಗೆ ತಳಹದಿ ಎಂದು ಸಾರಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾಕ್ಟರ್ ಜೀಯವರು, ಸನಾತನ ಧರ್ಮವೇ ಈ ದೇಶದ ಜೀವಾಳವಾಗಿದ್ದು ಈ ಕಾರಣದಿಂದಲೇ ಭಾರತವು ಪ್ರಪಂಚಕ್ಕೆ ಗುರುವಿನ ಸ್ಥಾನದಲ್ಲಿದೆ ಎಂದಿದ್ದರು. ಇಂತಹ ಸಂಸ್ಕಾರ ಸುಧೆಯನ್ನು ಸ್ವೀಕರಿಸಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ವಿದ್ಯಾಲಯಗಳೇ ದೇವಾಲಯಗಳಾದಾಗ ನಮ್ಮ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಶಾಲೆಯಲ್ಲಿ ’ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ’ ಪ್ರಯುಕ್ತ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರು, ಭಾರತವು ಬಣ್ಣ, ಸಂಸ್ಕೃತಿ, ಆಚರಣೆ, ಪ್ರಾಕೃತಿಕ ವೈವಿಧ್ಯತೆ ಹೀಗೆ ಎಲ್ಲದರಲ್ಲಿಯೂ ವೈಶಿಷ್ಠ್ಯತೆ ಹೊಂದಿದ್ದು, ಜಗತ್ತಿನ ಎಲ್ಲರಿಗೂ ಬೇಕಾದ ಆಹಾರ, ಜಲ, ಖನಿಜ, ತೈಲ ಎಲ್ಲವನ್ನೂ ನೀಡುವಷ್ಟು ಸಮೃದ್ಧವಾದ ಶ್ರೇಷ್ಠ ಭೂಮಿಯಾಗಿದೆ. ಇಂತಹ ಶ್ರೇಷ್ಠ ಧರ್ಮ ಹೊಂದಿದ ದೇಶದ ಬಗ್ಗೆ ನಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಹಿರಿಯರು ಮಾರ್ಗದರ್ಶನ ನೀಡಿ, ದೇಶ, ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಬೇಕು. ’ನಾನು ಏನು’ ಎಂಬ ಅರಿವು ಮೂಡಿಸಿ ಅಂತಹ ಮಗುವಿನಿಂದ ಮನೆಗೆ, ಸಮಾಜಕ್ಕೆ, ದೇಶಕ್ಕೆ ತನ್ಮೂಲಕ ಸಮಸ್ತ ಜಗತ್ತಿಗೆ ಒಳಿತನ್ನು ಉಂಟುಮಾಡುವಂತಹ ವ್ಯಕ್ತಿತ್ವ ನಿರ್ಮಾಣವಾಗಲು ಶಾಲೆ ಹಾಗೂ ಹೆತ್ತವರು ಕಾರಣಕರ್ತರಾಗಬೇಕು ಎಂದು ಕರೆ ನೀಡಿದರು.
ಬೆಳ್ಳಿಹಬ್ಬದ ಪ್ರಯುಕ್ತ ಬಿಡುಗಡೆಗೊಳ್ಳಲಿರುವ ಸ್ಮರಣ ಸಂಚಿಕೆಗೆ ಜಾಹಿರಾತು ನೀಡುವ ಒಪ್ಪಿಗೆ ಪತ್ರಕವನ್ನು ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಹೇರಳೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶತಂತ್ರಿ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಗೋಪಾಲ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್ ಕೊಂಕೋಡಿ, ಬೆಳ್ಳಿಹಬ್ಬ ಸಮಿತಿಯ ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್, ಸಂಚಾಲಕ ವಿನೋದ್ಕುಮಾರ್ ರೈ ಗುತ್ತು, ಬೆಟ್ಟಂಪಾಡಿ ಇವರು ಉಪಸ್ಥಿತರಿದ್ದರು.
ತಿಳಿವಿನ ಹಾದಿಯ ಭದ್ರಬುನಾದಿಗೆಗೆ ಎಳೆಯ ಮಕ್ಕಳಿಗೆ ಪುರೋಹಿತರ ನೇತೃತ್ವದಲ್ಲಿ ಅಕ್ಷರಾಭ್ಯಾಸವು ಸಂಭ್ರಮದಿಂದ ನೆರವೇರಿತು.
ದೀಪ ಬೆಳಗಿಸಿ, ಭಾರತಮಾತೆಗೆ ಪುಷ್ಪಾರ್ಚನೆಗೈದು ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಕೋಶಾಧಿಕಾರಿ ವಸಂತ ಸುವರ್ಣ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಮಾತಾಜಿಯವರು ಪ್ರಾರ್ಥನೆಗೈದರು. ಶಾಲೆಯ ಸದಸ್ಯರಾದ ರಮೇಶ್ಚಂದ್ರ ಧನ್ಯವಾದ ಸಲ್ಲಿಸಿ, ಶ್ರೀಮತಿ ಗೀತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.