ವಿವಾಹ ಎನ್ನುವುದು ಕೇವಲ ಭೋಗಕ್ಕಾಗಿ ಅಲ್ಲ, ಎರಡು ಜೀವಗಳು ಬೆಸೆಯುವ ಈ ಸಂಬಂಧವು ಎರಡು ಕುಟುಂಬಗಳನ್ನು ಜೋಡಿಸುತ್ತದೆ. ದೈವಾನುಗ್ರಹದಿಂದ ಪಡೆದ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಸಮಾಜಕ್ಕೆ ಯೋಗ್ಯ ವ್ಯಕ್ತಿಗಳನ್ನು ನೀಡುವ ಜವಾಬ್ದಾರಿ ತಂದೆ ತಾಯಿಗಳಿಗಿರಬೇಕು. ಮಕ್ಕಳಲ್ಲಿ ಸಮಷ್ಠಿಯ ಬಗ್ಗೆ ಅಂದರೆ, ಸಮಸ್ತ ಸೃಷ್ಟಿ, ಜಗತ್ತು ವಿಶ್ವವನ್ನೇ ಪ್ರೀತಿಸಿ ಗೌರವಿಸುವ ಸಂಸ್ಕೃತಿ ಬೆಳೆಸಿದಾಗ ’ವಸುದೈವ ಕುಟುಂಬಕಮ್’ ಎಂಬ ಮಾತು ಸಾರ್ಥಕವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ನವದಂಪತಿಗಳ ಸಮಾವೇಶ’ ಎಂಬ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಕುಟುಂಬ ಪ್ರಭೋದನ್ ಪ್ರಮುಖ್ ಸು.ರಾಮಣ್ಣರವರು ನವವಿವಾಹಿತರನ್ನುದ್ದೇಶಿಸಿ ಮಾತನಾಡಿದರು. ಹಿರಿಯ ದಂಪತಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸನ್ಮಾನಿತರಾದ ನಿವೃತ್ತ ಅಧ್ಯಾಪಕ ದಂಪತಿಗಳಾದ ಮಜಿ ನಾರಾಯಣ ಭಟ್ ದಂಪತಿಗಳು ಹಾಗೂ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಗುರುವ ದಂಪತಿಗಳು ತಮ್ಮ ದಾಂಪತ್ಯ ಜೀವನದ ಸಿಹಿ ಅನುಭವಗಳನ್ನು ಹಂಚಿಕೊಳ್ಳುತ್ತಾ ನೂತನ ದಂಪತಿಗಳಿಗೆ ಶುಭ ಹಾರೈಸಿದರು.
ನವ ವಿವಾಹಿತರೊಂದಿಗೆ ಆಪ್ತ ಸಂವಾದ ನಡೆಸಿದ ಡಾ. ಸುಧಾ ರಾವ್ ಮತ್ತು ಶ್ರೀ ಸತೀಶ್ ರವರು ಸಂಸ್ಕಾರಯುತ ಸುಖೀ ಜೀವನಕ್ಕೆ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಉತ್ಸಾಹಿ ನವದಂಪತಿಗಳು ಈ ವಿಶಿಷ್ಠ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಯುತ್ ನಾಯಕ್ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಆಹ್ವಾನಿತರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ವಿನೋದ್ ಕುಮಾರ್ ರೈ, ಹಿರಿಯ ದಂಪತಿಗಳು ಉಪಸ್ಥಿತರಿದ್ದರು. ಶ್ರೀಮತಿ ಉಮಾ ಶಿವರಾಂ ಪ್ರಾರ್ಥಿಸಿ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಶ್ರೀ ಸಜಿತ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಉಮಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ, ಶಿಕ್ಷಕ – ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕ ವೃಂದ ಕಾರ್ಯಕ್ರಮದಲ್ಲಿ ಸಹಕರಿಸಿದರು. ಚೆಂಡೆ, ವಾದ್ಯಗಳೊಂದಿಗೆ ದಂಪತಿಗಳನ್ನು ಸ್ವಾಗತಿಸಿ ಕಾರ್ಯಕ್ರಮವು ಉದ್ಫಾಟನೆಗೊಂಡಿತು.