ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೆಡ್ಕರ್ರವರಿಂದ ಸಿದ್ಧಗೊಂಡ ಸಂವಿಧಾನದ ನಿಯಮಗಳಿಗೆ ಬದ್ಧರಾಗಿ ಸತ್ಯ, ನ್ಯಾಯ, ನಿಷ್ಠೆಯಿಂದ ದೇಶ ಸೇವೆಯಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ಜೀವನದಲ್ಲಿ ಶಿಸ್ತು ಅವಿಭಾಜ್ಯ ಅಂಗವಾಗಿದ್ದಾಗ ಪ್ರತಿಯೊಂದು ಕಾರ್ಯದಲ್ಲೂ ನಾವು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ 2016 ನೇ ವರ್ಷದಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಗಾರ್ಡ್ ಆಫ್ ಹಾನರ್ನಲ್ಲಿ ಭಾಗವಹಿಸಿರುವ ಕೆಡೆಟ್ ಕು. ವಿನಿತಾರವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
69 ನೇ ಗಣರಾಜ್ಯೋತ್ಸವವನ್ನು ಶಾಲಾ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ ನಾಯಕ್, ಸದಸ್ಯರಾದ ವಸಂತ ಸುವರ್ಣ, ರಮೇಶ್ಚಂದ್ರ ಹಾಗೂ ಶಿಕ್ಷಕ -ರಕ್ಷಕ ಸಂಘದ ಕಾರ್ಯದರ್ಶಿ ಜಯಂತ್ ಗೌಡ, ಶಾಲಾ ಪೋಷಕರು ಹಾಗೂ ಪ್ರೌಢಶಾಲಾ ಮುಖ್ಯಗುರು ಆಶಾ ಬೆಳ್ಳಾರೆ, ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಘೋಷ್ ವಾದನದೊಂದಿಗೆ ಆಕರ್ಷಕ ಪಥಸಂಚಲನ ನಡೆಯಿತು. ವಿದ್ಯಾರ್ಥಿಗಳು ತ್ರಿವರ್ಣ ಧ್ವಜದೊಂದಿಗೆ ಭಾರತಮಾತೆಗೆ ಜೈಕಾರ ಹಾಕುತ್ತಾ ಗಣರಾಜ್ಯ ದಿನದ ಉತ್ಸವವನ್ನು ಸಂಭ್ರಮಿಸಿದರು. ವಿದ್ಯಾರ್ಥಿಗಳು ಪಾರ್ಥಿಸಿ, ಶಿಕ್ಷಕಿ ಶ್ರೀಮತಿ ಸೌಮ್ಯಶ್ರೀ ಪಿ.ಡಿ ನಿರೂಪಿಸಿದರು.