ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ 6 ದಿನಗಳ ’ಕಲರವ’ ಮತ್ತು ಬಣ್ಣ’ ಈ ಶಿಬಿರಗಳ ಸಮಾರೋಪ ಸಮಾರಂಭದಲ್ಲಿ ಶ್ರೀರಾಮ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಶ್ರೀಯುತ ಅಶೋಕ್ ಮಾತನಾಡಿ, ‘ಮಕ್ಕಳ ಬೆಳವಣಿಗೆಗೆ ಒಬ್ಬ ಉತ್ತಮ ಗುರುವಿನ ಪ್ರೇರಣೆ ಅತೀ ಅಗತ್ಯ. ಶಿಬಿರಗಳಂತಹ ವೇದಿಕೆಗಳು ದೊರೆತಾಗ ಮಕ್ಕಳ ಸುಪ್ತ ಪ್ರತಿಭೆಗಳು ಹೊರಹೊಮ್ಮಿ ಅವರಲ್ಲಿ ಆತ್ಮವಿಶ್ವಾಸ, ಧೈರ್ಯ, ಉತ್ತಮ ಚಟುವಟಿಕೆಗಳ ಅಭ್ಯಾಸಗಳು ಬೆಳೆಯುತ್ತವೆ’ ಎಂದು ನುಡಿದರು.
ಶಾಲಾ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಮಾತನಾಡಿ, ’ಮಗುವಿನ ಬೆಳವಣಿಗೆಗೆ ಹಿರಿಯರ ಪ್ರೇರಣಾದಾಯಕ ಮಾತುಗಳು, ನಡವಳಿಕೆಗಳು ಸಹಕಾರಿಯಾಗಿದ್ದು, ಸತ್ಯ, ಪ್ರಾಮಾಣಿಕತೆ, ನಿಷ್ಠೆ ಇತ್ಯಾದಿ ಮೌಲ್ಯಯುತ ಗುಣಗಳ ಅಳವಡಿಕೆಯಾಗಬೇಕು’ಎಂದು ಹೇಳಿದರು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರದಲ್ಲಿ ರಚನೆಗೊಂಡ ಚಿತ್ರಕಲೆ, ಕರಕುಶಲ ವಸ್ತುಗಳ ಪ್ರದರ್ಶನ ಜೊತೆಗೆ ಭಜನೆ, ಅಭಿನಯಗೀತೆ, ನಾಟಕಗಳು ಸಭಿಕರನ್ನು ರಂಜಿಸಿದವು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ವಸಂತ ಸುವರ್ಣ, ಮುಖ್ಯಗುರುಗಳಾದ ಆಶಾ ಬೆಳ್ಳಾರೆ, ನಳಿನಿ ವಾಗ್ಲೆ, ಸಂಪನ್ಮೂಲ ವ್ಯಕ್ತಿಗಳಾದ ವಸಂತ ಲಕ್ಷ್ಮೀ, ಯೋಗ ಶಿಕ್ಷಕರಾದ ಚಂದ್ರಶೇಖರ್, ಸಹಶಿಕ್ಷಕರಾದ ವೀಣಾ ಸರಸ್ವತಿ, ಶ್ರೀ ರುಕ್ಮಯ ಪೂಜಾರಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಕು. ತನ್ಮಯಿ ಸ್ವಾಗತಿಸಿ, ಕು. ಇಶಾ ಧನ್ಯವಾದ ಸಮರ್ಪಿಸಿ, ಕು. ಧಾತ್ರಿ ರೈ ಕಾರ್ಯಕ್ರಮ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.