ಪರಿಪೂರ್ಣ ಸನಾತನ ಟ್ರಸ್ಟ್ ವತಿಯಿಂದ ನಡೆದ “ಸ್ವದೇಶಿ ಬಳಸಿ ದೇಶ ಉಳಿಸಿ “ಸೈಕಲ್ ಜಾಥಾವು ಡಿಸೆಂಬರ್ 13 ರಂದು ಬೆಂಗಳೂರಿನಿಂದ ಹೊರಟು ಡಿಸೆಂಬರ್ 17 ರಂದು ಪುತ್ತೂರಿಗೆ ತಲುಪಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಪುತ್ತೂರಿನ ನಾಗರಿಕರು ಭವ್ಯ ಸ್ವಾಗತ ನೀಡಿ ಸೈಕಲಿಂಗ್ ನಲ್ಲಿ ಭಾಗವಹಿಸಿರುವ ಎಲ್ಲರಿಗೂ ಬೆಂಬಲ ನೀಡಿದರು.
ನಿವೃತ್ತ ಯೋಧರಿಗೆ ನಮ್ಮ ಶಾಲೆಯ ವಿದ್ಯಾರ್ಥಿನಿಯರು ಆರತಿ ಬೆಳಗಿ ತಿಲಕವಿಟ್ಟು ಬರಮಾಡಿಕೊಂಡರು, ಬಳಿಕ ಯೋಧರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪುತ್ತೂರಿನ ನಿವೃತ್ತ ಯೋಧರು ಸೈಕಲ್ ಜಾಥಕ್ಕೆ ಆಗಮಿಸಿದ ನಿವೃತ್ತ ಯೋಧರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಇವರು ಸ್ವದೇಶಿ ವಸ್ತುಗಳ ಬಳಕೆಯ ಕುರಿತು ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದರು. ನಂತರ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಸೈಕಲಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ಈ ಜಾಥಾದಲ್ಲಿ 65 ವರ್ಷ ಮೇಲ್ಪಟ್ಟವರು ಭಾಗವಹಿಸಿರುವುದು ವಿಶೇಷವಾಗಿತ್ತು. ಇದರಲ್ಲಿ ನಿವೃತ್ತ ಯೋಧರು, ವೈದ್ಯರು, ಇಂಜಿನಿಯರ್ ಗಳು, ವಿಜ್ಞಾನಿಗಳು, ಬ್ಯಾಂಕ್ ಉದ್ಯೋಗಿಗಳು, ಮಹಿಳೆಯರು ಹಾಗೂ ವಿದೇಶದಲ್ಲಿ ಬೇರೆ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿರುವವರು ಭಾಗವಹಿಸಿದರು. ಈ ಜಾಥವು 37 ದಿನಗಳ ಕಾಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳನ್ನು ವ್ಯಾಪಿಸಿ ಸ್ವದೇಶಿ ವಸ್ತುಗಳ ಬಳಕೆ ಕುರಿತು ಸಂದೇಶವನ್ನು ನೀಡುತ್ತಾ ದೇಶದ ನಾಗರಿಕರಿಗೆ ಕಾಳಜಿಯನ್ನು ಮೂಡಿಸುವುದು ಉದ್ದೇಶವಾಗಿತ್ತು. ವಿವೇಕಾನಂದ ಕನ್ನಡ ಮಾಧ್ಯಮದ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಸೈಕಲ್ ನೊಂದಿಗೆ ಜಾಥದಲ್ಲಿ ಪಾಲ್ಗೊಂಡರು.