
ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಉದ್ಘಾಟಕರಾಗಿ ಆಗಮಿಸಿದ ರಾಷ್ಟ್ರೀಯ ಕ್ರೀಡಾಪಟು ಆನಂದ ಶೆಟ್ಟಿ ಕಲ್ಲಡ್ಕ ಇವರು ಶಾಲಾ ಸರಸ್ವತಿ ಬಳಿ ಪ್ರಜ್ವಲಿತ ದೀಪದಿಂದ ಬೆಳಗಿಸಿ ತಂದ ಕ್ರೀಡಾ ಜ್ಯೋತಿಯಿಂದ ಕ್ರೀಡಾಕೂಟದ ದೀಪ ಬೆಳಗಿಸಿ “ ಬಾಲ್ಯದಿಂದಲೇ ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇರುತ್ತದೆ. ಅದರಲ್ಲೂ ಕ್ರೀಡಾಸಕ್ತಿ ಮತ್ತು ಪಾಲ್ಗೊಳ್ಳುವಿಕೆ ದೈಹಿಕ, ಮಾನಸಿಕ, ಬೌದ್ಧಿಕ ವಿಕಾಸಕ್ಕೆ ಪೂರಕವಾಗಿದೆ. ವ್ಯಕ್ತಿ ಬೆಳೆದಂತೆ ಸ್ವಶಿಸ್ತು, ಬದ್ಧತೆ, ಸಮಯಪ್ರಜ್ಞೆ, ಛಲದ ಮನೋಭಾವ ಬೆಳೆದಲ್ಲಿ ಅದು ಸಾಧನೆಗೆ ಹಾದಿಯಾಗುತ್ತದೆ. ಈ ದಿಶೆಯಿಂದ ಜಿಲ್ಲೆ – ರಾಜ್ಯ- ರಾಷ್ಟ್ರಮಟ್ಟಗಳಲ್ಲಿ ಬೆಳಗುತ್ತಿರುವ ವಿವೇಕಾನಂದ ಕನ್ನಡ ಶಾಲೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಆಡಳಿತ ಮಂಡಳಿ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಾಲಾ ಶಿಕ್ಷಕ ವೃಂದದವರ ಬೆಂಬಲ ಉಲ್ಲೇಖನೀಯ” ಎಂದರು. ಇನ್ನೊರ್ವ ರಾಷ್ಟ್ರೀಯ ಕ್ರೀಡಾಪಟು ಪ್ರಸ್ತುತ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಕು. ಪವಿತ್ರಾ ಜಿ ಇವರು ಶಾಲಾ ಪ್ರತಾಪ್, ಶಿವಾಜಿ, ತಿಲಕ್, ಸುಭಾಷ್ ತಂಡಗಳಿಂದ ವಂದನೆ ಸ್ವೀಕರಿಸಿ, ಶಾಲಾ ಹತ್ತನೇ ತರಗತಿ ವಿದ್ಯಾರ್ಥಿನಿ ಶಿಕ್ಷಣ ಇಲಾಖೆಯ ಎತ್ತರ ಜಿಗಿತ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದು, ಇದೀಗ ಎತ್ತರ ಜಿಗಿತ, ಹರ್ಡಲ್ಸ್, ತ್ರಿವಿಧಜಿಗಿತದಲ್ಲಿ ಕೂಟ ದಾಖಲೆ ನಿರ್ಮಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಮಂಗಳೂರು ವಿಶ್ವವಿದ್ಯಾಲಯದ ಬಿ.ಪಿ.ಎಡ್ ಪದವಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ವಿಜೇತೆಯಾದ ಶಾಲಾ ಹಿರಿಯ ವಿದ್ಯಾರ್ಥಿನಿ ಕು. ಚೈತ್ರಾ ಕ್ರೀಡಾ ಧ್ವಜಾರೋಹಣಗೈದರು.
ಶಾಲಾ ಕಛೇರಿ ಸಹಾಯಕರಾದ ವಿಜಯ ಇವರ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಘೋಷ್ ತಂಡದೊಂದಿಗೆ ಶಿಸ್ತುಬದ್ಧ ಮೆರವಣಿಗೆಯೊಂದಿಗೆ ಆಗಮಿಸಿದ ಕಬಡ್ಡಿ, ಖೋ-ಖೋ, ವಾಲಿಬಾಲ್, ಅಥ್ಲೆಟಿಕ್ಸ್ಕ್ರೀಡಾಪಟುಗಳು ಪಥ ಸಂಚಲನದ ನೇತೃತ್ವ ವಹಿಸಿದರು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ, ಸಂಚಾಲಕರಾದ ವಸಂತ ಸುವರ್ಣ, ಕೋಶಾಧಿಕಾರಿಗಳಾದ ಅಶೋಕ್ ಕುಂಬ್ಳೆ ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಾಲಾ ಅನ್ನಪೂರ್ಣಾ ಸಮಿತಿ ಅಧ್ಯಕ್ಷರಾದ ಶ್ಯಾಮಲ ನಾಯಕ್, ಶಾಲಾ ಪೋಷಕರಾದ ಬಾಳಿಲ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರಮೇಶ್, ವಿವೇಕಾನಂದ ಪ್ರಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|ಶೋಭಿತಾ ಸತೀಶ್, ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ರೈ, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ ಇವರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ನಮಿತಾ ಕ್ರೀಡಾಕೂಟವನ್ನು ಸಂಯೋಜಿಸಿದರು. ಶಾಲಾ ಸಾಧನೆಗಳಲ್ಲಿ ಕೈಜೋಡಿಸುತ್ತಿರುವ ತರಬೇತುದಾರರಾದ ಬಾಲಚಂದ್ರ, ಮನೋಹರ್, ಪುರಂದರ, ಯಶಸ್ವಿ, ಕಾರ್ತಿಕ್ ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕರಾದ ರಾಜೇಶ್ ಹಾಗೂ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.