’ಸಾಂಸ್ಕೃತಿಕ ವೈವಿಧ್ಯತೆಯ ಅರಿವಿಗೊಂದು ವೇದಿಕೆ’- ಎಂಬ ಪರಿಕಲ್ಪನೆಯೊಂದಿಗೆ ಭರತನಾಟ್ಯ, ಸಂಗೀತ, ಯಕ್ಷಗಾನ, ನಾಟಕ, ಹರಿಕಥೆ ಮುಂತಾದ ಸಾಂಸ್ಕೃತಿಕ ವೈವಿಧ್ಯತೆಯ ಅರಿವನ್ನು ಮಕ್ಕಳಿಗೆ ತೆರೆದಿಡುವ ಸಲುವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ’ಸಾಂಸ್ಕೃತಿಕ ಸಮನ್ವಯ’ ಎಂಬ ಕಾರ್ಯಕ್ರಮವನ್ನು ಸಂಘಟಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಓದಿನೊಂದಿಗೆ ಕಲೆಯ ತಿಳಿವಿನ ಅರಿವು ಕೂಡಾ ಮುಖ್ಯ ಎಂಬುದೇ ಕಲಾಸಕ್ತ ಆಡಳಿತ ಮಂಡಳಿ ಮತ್ತು ಶಿಕ್ಷಕರ ಅಭಿಪ್ರಾಯ. ಈ ನಿಟ್ಟಿನಲ್ಲಿ ವಾರ್ಷಿಕ ಯೋಜನೆಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ಪ್ರಕಾರಗಳನ್ನು ಪ್ರಚುರಪಡಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಯು ’ಶಿಕ್ಷಣದ ಜೊತೆಗೆ ಕಲೆಯ ಪಾಠವನ್ನು ಮಾಡುತ್ತಿರುವುದು ಶ್ಲಾಘನೀಯ’ಎಂದು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅಭಿಪ್ರಾಯ ಪಟ್ಟರು.
ಸಾಂಸ್ಕೃತಿಕ ಸಮನ್ವಯದ ಮೊದಲ ಕಾರ್ಯಕ್ರಮವಾಗಿ ಭರತನಾಟ್ಯ ಕಲಾವಿದೆ ಮಂಗಳೂರು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ಇವರು ’ಜ್ಞಾನವಾಹಿನಿ’ ಎಂಬ ಶೀರ್ಷಿಕೆಯಡಿ ಪ್ರಾತ್ಯಕ್ಷಿಕೆಯ ಮೂಲಕ ಭರತನಾಟ್ಯದಲ್ಲಿ ಬರುವ ಹಸ್ತಗಳ ಬಳಕೆ, ಸ್ವಚ್ಛಭಾರತ, ಸಮಕಾಲೀನ ವಿಷಯಗಳನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ವಿನ್ಯಾಸಗೊಳಿಸಿ ಪ್ರಸ್ತುತಪಡಿಸಿದ ರೀತಿ ಅಭಿನಂದನೀಯವಾಗಿತ್ತು. ದೃಶ್ಯದ ಮೂಲಕ ಪೌರಾಣಿಕ ಕಥಾಭಾಗಗಳನ್ನು ಅರ್ಥೈಸಿಕೊಂಡ ಮಕ್ಕಳ ನೈಜ ಮತ್ತು ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಕ್ಕಳೊಂದಿಗೆ ಸಂವಾದ ನಡೆಸುತ್ತಾ ಮುನ್ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ದೀಪಕ್ಕುಮಾರ್ ಇವರೂ ಉಪಸ್ಥಿತರಿದ್ದು ಪ್ರಾತ್ಯಕ್ಷಿಕೆಯ ನಂತರದ ಸಂವಾದದಲ್ಲಿ ಭಾಗವಹಿಸಿದರು. ಶಾಲಾ ಸಹಶಿಕ್ಷಕಿ ಶ್ರೀಮತಿ ಅನುಷಾ ಕಾರ್ಯಕ್ರಮವನ್ನು ಸಂಯೋಜಿಸಿದರು.