ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 10 ದಿವಸಗಳ ಕಾಲ ಕು. ನಾಗರತ್ನರವರ ಸಹಕಾರದೊಂದಿಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಡೆಸಿದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಕಾರ್ಯಕ್ರಮ ಸಂಪನ್ನಗೊಂಡಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಅಮೈ ಅಧ್ಯಕ್ಷತೆಯನ್ನು ವಹಿಸಿ ಸಂಸ್ಕೃತ ಭಾಷೆಯನ್ನು ಕಲಿಯಲು ಯಾವುದೇ ಹಿಂಜರಿಕೆ ಬೇಡ ಎಂದರು.
ಮುಖ್ಯ ಅತಿಥಿಗಳಾಗಿ ಸರಸ್ವತಿ ವಿದ್ಯಾಲಯ ನರಿಮೊಗರು ಇದರ ಸಂಚಾಲಕರಾದ ಶ್ರೀ ಅವಿನಾಶ್ ಕೊಡೆಂಕಿರಿಯವರು ಮಾತನಾಡಿ ಸಂಸ್ಕೃತ ಭಾಷೆಯ ಹಿರಿಮೆ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಸಂಸ್ಕೃತ ಭಾರತಿಇದರ ಪ್ರಚಾರ ಪ್ರಮುಖರಾದ ಶ್ರೀ ದತ್ತಾತ್ರೇಯ ವಜ್ರಳ್ಳಿಯವರು ಸಂಸ್ಕೃತ ಭಾಷಾಧ್ಯಯನದಿಂದ ಸಂಸ್ಕೃತಿ – ಸಂಸ್ಕಾರ ಹಾಗೂ ಉಚ್ಛಾರ ಸ್ಪಷ್ಟತೆಯು ವ್ಯಕ್ತಿಯಲ್ಲಿ ತಾನಾಗಿಯೇ ಆಗುವುದು ಎಂದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಶಾಲಾ ಪೋಷಕರು, ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.