ದಾಂಪತ್ಯ ಎಂಬುದು ಎರಡು ಕುಟುಂಬಗಳ ಗಂಡು ಮತ್ತು ಹೆಣ್ಣುಗಳ ಮನೆ ಮನಗಳನ್ನು ಜೋಡಿಸುವ ಪವಿತ್ರ ಬಂಧನವಾಗಿದೆ. ಪ್ರಜ್ಞಾಪೂರ್ವಕವಾಗಿ ಜವಾಬ್ದಾರಿಗಳನ್ನು ಹಂಚಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಸಂಸಾರವನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿಯೇ ವಿವಾಹ ಜೀವನದ ಸಾರ್ಥಕ್ಯವಿದೆ. ಇಂತಹ ಸಂಸ್ಕೃತಯುತ ಕುಟುಂಬ ವ್ಯವಸ್ಥೆಯೇ ಸದೃಢ ದೇಶದ ಬೆನ್ನೆಲುಬಾಗಿದೆ.
ಸುಸಂಸ್ಕೃತ ತಾಯಿಯ ಮಾರ್ಗದರ್ಶನದಿಂದ ಮನೆಯ ಮಕ್ಕಳು ಸತ್ಪ್ರಜೆಗಳಾಗಿ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ ಎಂದು ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದರ ಬಾಲ್ಯದ ಪ್ರೇರಣಾದಾಯಿ ಘಟನೆಗಳನ್ನು ಉದಾಹರಿಸುತ್ತಾ ಕುಟುಂಬ ಪ್ರಭೋದನ ಕರ್ನಾಟಕ ದಕ್ಷಿಣ ಪ್ರಾಂತದ ಸಹಸಂಯೋಜಕರಾದ ಶ್ರೀ ವೆಂಕಟೇಶ್ ಹೆಗಡೆಯವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅನ್ಯಾನ್ಯ ಸಂಸ್ಥೆಗಳು, ಶಾಲಾ ಮಾತೃ ಭಾರತಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ನವದಂಪತಿ ಸಮಾವೇಶ’ದ ಸಂದರ್ಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ದಂಪತಿಗಳಾದ ಶ್ರೀ ಚಿದಾನಂದ ನಾಡಾಜೆ ಮತ್ತು ಶ್ರೀಮತಿ ಸುಮಿತ್ರ ಚಿದಾನಂದರವರು ನವದಂಪತಿಗಳಿಗೆ ಶೀಘ್ರ ಕೋಪ, ದುಡುಕುತನವನ್ನು ನಿಗ್ರಹಿಸಿ ಶಾಂತಿ ಸಹನೆ ಮೈಗೂಡಿಸಿ ಸಮಚಿತ್ತದಿಂದ ಬಾಳಿದರೆ ಜೀವನ ಸುಗಮವಾಗುವುದು. ಎಂದು ಕಿವಿಮಾತು ಹೇಳಿದರು. ಆನಂತರ ನವದಂಪತಿಗಳು ಪರಸ್ಪರ ಪರಿಚಯಿಸುತ್ತಾ ಸಮಾವೇಶದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಧು-ವರರಿಗೆ ಪ್ರತ್ಯೇಕವಾಗಿ ಮಂಗಳೂರಿನ ಮಹಿಳಾ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಮತಿ ಮತ್ತು ಕುದುರೆಮುಖ ಐರನ್ ಇಂಡಸ್ಟ್ರೀಸ್ನಲ್ಲಿ ಸೀನಿಯರ್ ಇಂಜಿನಿಯರ್ ಆಗಿರುವ ಶ್ರೀಯುತ ಗಜಾನನ ಪೈಯವರು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡುತ್ತಾ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಲಾ ಅಧ್ಯಕ್ಷರಾದ ಶ್ರೀ ಅಚ್ಯುತ್ ನಾಯಕ್ರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ವಿನೋದ್ ಕುಮಾರ್ ರೈ ಗುತ್ತು, ಬೆಟ್ಟಂಪಾಡಿ ಉಪಸ್ಥಿತರಿದ್ದರು.
ಮದುವೆಯ ದಿನದ ಸಂಭ್ರಮವನ್ನು ನೆನಪಿಸುವಂತೆ ನಡೆದ ಸಮಾವೇಶದಲ್ಲಿ ನವದಂಪತಿಗಳನ್ನು ಕುಳ್ಳಿರಿಸಿ, ಉಡಿಯನ್ನು ತುಂಬಿಸಿ, ಆರತಿ ಬೆಳಗಿ ಶುಭ ಕೋರಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಮಾತೃ ಭಾರತಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಶಾಲಾ ಮಾತಾಜಿಯವರು ಪ್ರಾರ್ಥಿಸಿ, ಶ್ರೀಮತಿ ಅನುಷಾ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.