ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ರೂಢಿಸಿಕೊಳ್ಳಲು ಶ್ರಮಿಸಿದರೆ ಉತ್ತಮ ಭವಿಷ್ಯವು ಅವರದಾಗುತ್ತದೆ. ಸಂಸ್ಕಾರಯುತ ವಿದ್ಯಾರ್ಥಿಗಳಿಂದ ನಮ್ಮ ದೇಶವು ವಿಶ್ವಗುರು ಎನಿಸಿಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಶ್ರೀರಾಮ ಪ್ರೌಢಶಾಲೆ ನೆಲ್ಯಾಡಿ ಇಲ್ಲಿನ ಮುಖ್ಯ ಗುರುಗಳಾದ ಶ್ರೀಯುತ ಗಣೇಶ್ ವಾಗ್ಲೆ ನುಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ, ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಂದರ್ಭದಲ್ಲಿ ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಉದ್ಫಾಟನೆಯನ್ನು ಶ್ರೀಮತಿ ಶ್ರೀಲಕ್ಷ್ಮೀ ಸುರೇಂದ್ರ ಕಿಣಿ ನೆರವೇರಿಸಿದರು. ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ, ಉದ್ಯಮಿ ವಿನ್ಯಾಸ್ ಸೇಡಿಯಾಪು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವೆಂಕಟರಮಣ ಭಟ್ ದೇರ್ಕಜೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಯುತ್ ನಾಯಕ್, ಪ್ರಾಥಮಿಕ ಶಾಲಾ ಮುಖ್ಯ ಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಪ್ರತೀಕ ಗಣಪತಿ ಸ್ವಾಗತಗೈದು, ಅನುಷಲಕ್ಷ್ಮೀ ಧನ್ಯವಾದ ಸಮರ್ಪಿಸಿ, ಕು. ಪೃಥಾ ಆರ್. ರೈ ಕಾರ್ಯಕ್ರಮ ನಿರೂಪಿಸಿದರು.