ಮಕ್ಕಳಿಗೆ ಶಾಲೆಗಳಲ್ಲಿ ನೀಡುವ ಶೈಕ್ಷಣಿಕ ಪಠ್ಯಕ್ರಮದೊಂದಿಗೆ ಕ್ರೀಡೆ, ಲಲಿತ ಕಲೆಗಳಿಗೂ ಪ್ರಾಮುಖ್ಯತೆ ನೀಡಿದಾಗ ಭಾರತೀಯತೆಯೊಂದಿಗೆ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ. ಸಾಹಿತ್ಯಕ್ಕೂ ಕ್ರಿಯೆಗೂ ಹೊಂದಾಣಿಕೆಯಾದಾಗ ಗುರು ಶಿಷ್ಯ ಪರಂಪರೆಗೂ ಮಹತ್ವವಿದ್ದಾಗ ವಿದ್ಯಾರ್ಥಿಗಳಿಗೆ ಮನುಷ್ಯತ್ವ, ಸರಳತೆ, ಸೌಜನ್ಯತೆ, ಬದ್ಧತೆ, ಶಿಸ್ತಿನೊಂದಿಗೆ ಹಿರಿಯರನ್ನು ಗೌರವದಿಂದ ಕಾಣುವ ಜೀವನ ಸತ್ವ, ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರೀ ಬಾಲಕೃಷ್ಣ ಹೊಸಮನೆ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಗಾನ – ನಾಟ್ಯ- ವೈಭವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಈ ಮಾತುಗಳನ್ನು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸನಾತನ ನಾಟ್ಯಾಲಯ ಮಂಗಳೂರು ಇಲ್ಲಿನ ವಿದುಷಿ ಶಾರದಾಮಣಿ ಶೇಖರ್ ಮಾತನಾಡಿ ಸಾಂಪ್ರಾದಾಯಿಕ ನೃತ್ಯ, ಸಂಗೀತಗಳಲ್ಲಿ ಸಾಧನೆ ಮಾಡುವುದೆಂದರೆ ಅದೊಂದು ತಪಸ್ಸಿನಂತೆ, ನಿರಂತರ ಪರಿಶ್ರಮ, ಹೆತ್ತವರ ಪ್ರೋತ್ಸಾಹದ ಜೊತೆ ಗುರುಗಳ ಮಾರ್ಗದರ್ಶನ ಮಾತ್ರ ಉತ್ತಮ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ್ ನಾಯಕ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸಂಗೀತ ಹಾಗೂ ನೃತ್ಯ ತರಬೇತಿ ನೀಡುತ್ತಿರುವ ಸಾಧನಾ ಸಂಗೀತ ಕಲಾಶಾಲೆಯ ವಿದುಷಿ ಸುಚಿತ್ರಾ ಹೊಳ್ಳ ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಶ್ರೀಮತಿ ಪ್ರೀತಿಕಲಾ ಮತ್ತು ವಿದ್ವಾನ್ಗಿರೀಶ್ ಕುಮಾರ್ರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಬಿ.ಜಿ ವಿನೋದ್ ರೈ ಗುತ್ತು, ಶಾಲಾ ಬೆಳ್ಳಿಹಬ್ಬ ಸಮಿತಿಯ ಕಾರ್ಯದರ್ಶಿ ಹರಿಣಿ ಪುತ್ತೂರಾಯ ಉಪಸ್ಥಿತರಿದ್ದರು. ಶಾಲಾ ಪೋಷಕರಾದ ಶ್ರೀ ರಾಮ್ಕುಮಾರ್ ಧನ್ಯವಾದ ಸಮರ್ಪಿಸಿ, ಶಿಕ್ಷಕಿ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಿತು.