ಪ್ರತಿಯೊಂದು ಮಗುವು ಪ್ರತಿಭಾಶಾಲಿಯೇ ಹೌದು. ಪ್ರತಿಭೆಗೆ ತಕ್ಕ ಪರಿಶ್ರಮ ಪಟ್ಟಾಗ ಸೂಕ್ತ ಪ್ರತಿಫಲ ಸಿಗುತ್ತದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಬೋಧಕರಾದ ಶ್ರೀ ಸತೀಶ್ ಕೆ ಇವರು ನುಡಿದರು. ಇವರು ವಿವೇಕಾನಂದ ಕನ್ನಡ ಶಾಲೆಯಲ್ಲಿ ನವೆಂಬರ್ 14 ರ ಮಕ್ಕಳ ದಿನಾಚರಣೆಯಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಫಾಟಕರ ನೆಲೆಯಲ್ಲಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಕು. ಅದಿತಿ ಕೆ.ಟಿ ಇವರು ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಶೇಷ ಸಾಧನೆಗೈದಾಗ ಸುತ್ತಮುತ್ತಲ ಸಮಾಅಜ ಗುರುತಿಸುತ್ತದೆ ಎಂದು ನುಡಿದರು.
ಸಭಾಧ್ಯಕ್ಷ ಸ್ಥಾನವನ್ನು ವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ತ್ರಿವೇಣಿ ಪೆರ್ವೋಡಿ ರಾಷ್ಟ್ರಮಟ್ಟದಲ್ಲಿ ಹಿರಿಯ ನಾಯಕರು ದೇಶದ ಹಿತದೃಷ್ಟಿಯಿಂದ ಮಾಡುವ ಚಿಂತನೆ, ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಭಾವೀ ಪ್ರಜೆಗಳಾದ ಮಕ್ಕಳು ಕೈ ಜೋಡಿಸಬೇಕು ಎಂದರು. ಈ ಸಂದರ್ಭ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮತ್ತು ಪಾಪೆಮಜಲು ಶಾಲಾ ಮಕ್ಕಳ ರಾಜ್ಯಮಟ್ಟ ವಿಜೇತ ಜಾಗತಿಕ ತಾಪಮಾನ ಪರಿಕಲ್ಪನೆಯ ಜನಪದ ನೃತ್ಯ ಹಾಗೂ ಬೆಳ್ಳಾರೆ ಪ್ರೌಢಶಾಲೆಯ ಮಕ್ಕಳ ಇಂಗ್ಲಿಷ್ ನಾಟಕ ಪ್ರದರ್ಶನಗೊಂಡಿತು. ಅನಂತರ ಪ್ರದರ್ಶಿತ ತಂಡದವರೊಂದಿಗೆ ಶಾಲಾ ಮಕ್ಕಳ ಪ್ರಶ್ನೋತ್ತರ ನಡೆಯಿತು.
ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಅಚ್ಯುತ್ ನಾಯಕ್, ಸಂಚಾಲಕರಾದ ವಿನೋದ್ ಕುಮಾರ್ ರೈ ಗುತ್ತು, ಖಜಾಂಚಿಯಾದ ವಸಂತ ಸುವರ್ಣ, ಶಾಲಾ ನಾಯಕ ಸಾತ್ವಿಕ್ ಶರ್ಮ, ಉಪನಾಯಕ ಆಶ್ರಯ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರುಗಳು, ಶಿಕ್ಷಕ – ಶಿಕ್ಷಕೇತರ ಬಂಧುಗಳು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸೂರ್ಯ ಸ್ವಾಗತಿಸಿ, ಧನುಷ್ ವಂದಿಸಿದರು. ತೃಷಾ. ಭಟ್ ನಿರೂಪಿಸಿದರು.