ಕಲಿಕೆ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರಬಾರದು. ಪರೀಕ್ಷೆ ಮತ್ತು ಅಂಕಗಳೇ ಅಂತಿಮವಲ್ಲ. ನಮ್ಮನ್ನು ಜ್ಞಾನಾತ್ಮಕವಾಗಿ ಬೆಳೆಸುವ ಗುಣ ನಿರ್ಮಾಣ ಮಾಡುವ ಕುಟುಂಬ ಪ್ರೇಮ, ದೇಶಪ್ರೇಮ ಬೆಳೆಸುವ ಅನುಭವಗಳಿಗೆ ಪ್ರಾಧ್ಯಾನತೆ ನೀಡಬೇಕು. ನಿಮ್ಮ ಬದುಕಿನಲ್ಲಿ ಹಿರಿಯರನ್ನು ಪ್ರೀತಿಸುವ ಮತ್ತು ಗೌರವಿಸುವ ಗುಣ ಬೆಳೆಯಬೇಕು. ತಂದೆ- ತಾಯಿಯರನ್ನು ಗೌರವದಿಂದ ಕಾಣಿ ಎಂದು ವಿವೇಕಾನಂದ ಕನ್ನಡ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳೊಂದಿಗೆ ತಮ್ಮ ಸ್ವ-ಗೃಹದಲ್ಲಿ ಅನುಭವ ಹಂಚಿಕೊಂಡವರು ನಿವೃತ್ತ ಶಿಕ್ಷಕರಾದ ಮಜಿ ನಾರಾಯಣ ಭಟ್ ಹಾಗೂ ಸರಸ್ವತಿ ದಂಪತಿಗಳು. ಗುರುಪೂರ್ಣಿಮೆಯ ಪ್ರಯುಕ್ತ ವಿವೇಕಾನಂದ ಕನ್ನಡ ಶಾಲೆಯ ಹತ್ತನೇ ತರಗತಿಯ ಮಕ್ಕಳು ಹಾಗೂ ಆಡಳಿತ ಮಂಡಳಿ ಹಾಗೂ ಸಹಶಿಕ್ಷಕರು ಇವರ ಮನೆಗೆ ತೆರಳಿ ಗುರುವಂದನೆ ಸಲ್ಲಿಸಿದರು. ಅನಂತರ ಉಪಾಹಾರ ಸ್ವೀಕರಿಸಿ ಆಶೀರ್ವಾದ ಪಡೆದು ತೆರಳಿದರು.