ಪ್ರಕೃತಿಯಲ್ಲಿ ಕಾಣುವ ನದಿ, ಗೋವು ಅಂತೆಯೇ ಹುಟ್ಟಿದ ನಾಡು ಎಲ್ಲವೂ ನಮಗೆ ಮಾತೃಸ್ವರೂಪಿ. ಈ ಮಾತೆಯರಲ್ಲಿ ಎಲ್ಲವನ್ನೂ ಧಾರಣೆಮಾಡುವ ಅಭೂತಪೂರ್ವವಾದ ಸಾಮರ್ಥ್ಯವಿದೆ. ತಾಯಂದಿರು ಕೇವಲ ತಮ್ಮ ಸಂಸಾರಕ್ಕೆ ಮಾತ್ರ ಸೀಮಿತವಾಗಿರಲಿ ತಮ್ಮ ಸುತ್ತಲಿನ ಪರಿಸರದಲ್ಲಿರುವ ಶಾಲೆ, ಸಂಘ ಸಂಸ್ಥೆಗಳ ಆಶೋತ್ತರಗಳಿಗೆ, ಅವಶ್ಯಕತೆಗಳಿಗೆ ತ್ರಿಕರಣಪೂರ್ವಕವಾಗಿ ಸ್ಪಂದಿಸುವುದರ ಮೂಲಕ ಈ ನೆಲದ ಭಾಷೆ, ಧರ್ಮ, ಸಂಸ್ಕೃತಿ ಜೀವನ ಮೌಲ್ಯಗಳ ಸೇವೆಗೆ ಮುಂದಾಗಬೇಕು ಎಂದು ಅಧ್ಯಕ್ಷೀಯ ಸ್ಥಾನದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರೂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಮಾತೃಭಾರತಿ’ ಸಂರಚನಾ ಸಮಿತಿಯಲ್ಲಿ ಮಾತೃಭಾರತಿಯ ಪರಿಕಲ್ಪನೆಯನ್ನು ಸಭೆಯ ಮುಂದಿರಿಸಿದರು.
ದೀಪ ಬೆಳಗಿಸಿ ಉದ್ಫಾಟಿಸಿದ ಶ್ರೀಮತಿ ಶಶಿಕಲಾ ಇವರು ಶುಭ ಹಾರೈಸಿದರು. ಮಾತೃಭಾರತಿ ಸಮಿತಿಯ ನೂತನ ಅಧ್ಯಕ್ಷರಾಗಿಪೋಷಕರಾದ ಶ್ರೀಮತಿ ರೇಖಾ ಆಯ್ಕೆಯಾದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಯುತ ನಾಯಕ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಿನೋದ್ ಕುಮಾರ್ ರೈ ಗುತ್ತು, ಆಡಳಿತ ಮಂಡಳಿ ಸದಸ್ಯರು, ಮುಖ್ಯಗುರುಗಳು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಸ್ವಾತಿ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಲ್ಲಿಸಿದರು.