ಭಜನೆಯಿಂದ ನಮ್ಮಲ್ಲಿ ಧರ್ಮಜಾಗೃತಿಯುಂಟಾಗಿ ದೇವರಲ್ಲಿ ಭಕ್ತಿಭಾವ ಉಂಟಾಗಿ ಸುಸಂಸ್ಕಾರ ಸಂಪನ್ನರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯರು ಮಕ್ಕಳನ್ನು ತಿದ್ದಿ ತೀಡಿ ಬೆಳೆಸಿದಲ್ಲಿ ಕಿರಿವಯಸ್ಸಿನಿಂದಲೇ ಉತ್ತಮ ಸಂಸ್ಕೃತಿಯನ್ನು ರೂಢಿಸಿಕೊಳ್ಳಲು ಸಹಾಯವಾಗುತ್ತದೆ. ಹೀಗೆಂದವರು ಶ್ರೀ ಶಶಾಂಕ ನೆಲ್ಲಿತ್ತಾಯರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪುತ್ತೂರಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ಭಜನಾ ಸ್ಪರ್ಧೆಯ ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಈ ಮೇಲಿನ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಫಾಟಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿದವರು ಶ್ರೀಮತಿ ವತ್ಸಲಾ ರಾಜ್ಞಿಯವರು ’ನಮ್ಮ ಸಂಸ್ಕೃತಿಯ ಒಂದು ಅಂಗವಾದ ಭಜನೆಯತ್ತ ಇಂದಿನ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಿ ಅದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುತ್ತಿರುವ ಶಾಲೆಯ ಪ್ರಯತ್ನ ಸ್ತುತ್ಯರ್ಹ’. ಎಂದು ನುಡಿದು ಭಜನಾ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ ನಾಯಕ್ ರವರು ಮಾತನಾಡುತ್ತಾ ದಾಸ ಸಾಹಿತ್ಯವು ಸಮಾಜದ ಓರೆಕೋರೆಗಳನ್ನು ತಿದ್ದುವ ಸಂದೇಶಗಳನ್ನು ಹೊಂದಿದ್ದು ಭಜನಾ ಮಾಧ್ಯಮದ ಮೂಲಕ ಇದನ್ನು ಪಸರಿಸಿ ನಮ್ಮಲ್ಲಿ ಅಳವಡಿಸಿ ಕೊಳ್ಳುವಂತಾಗಬೇಕು ಎಂದರು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ವಿನೋದ್ ಕುಮಾರ್ ರೈ, ಸದಸ್ಯರಾದ ರಮೇಶ್ಚಂದ್ರ ಎಂ, ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಣಮ್ಯ ಪ್ರಾರ್ಥಿಸಿ, ಶಿಕ್ಷಕಿ ಅನುಷಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಕು. ಧನ್ಯಶ್ರೀ ಮಾತಾಜಿ ಧನ್ಯವಾದ ಸಮರ್ಪಿಸಿದರು.