ಜೀವನದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗವಹಿಸಿ ಸಾಧನೆಗೈಯುವುದರ ಜೊತೆಗೆ ಶೈಕ್ಷಣಿಕ ಪ್ರಗತಿಗೂ ಅಷ್ಟೇ ಪ್ರಾಮುಖ್ಯತೆ ಕೊಡಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ವಾರ್ಷಿಕ ಕ್ರೀಡಾಕೂಟ -2018’ರ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ನಗರ ಮಹಿಳಾ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಶ್ರೀಮತಿ ಓಮನ ಶುಭ ನುಡಿಗಳನ್ನಾಡಿದರು.
ಇನ್ನೋರ್ವ ಅತಿಥಿಗಳಾದ ಅಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಚಂದ್ರಹಾಸರು ಧ್ವಜವಂದನೆ ಸ್ವೀಕರಿಸುತ್ತಾ ಕ್ರೀಡೆಯಲ್ಲಿ ಎದುರಾಗುವ ಸೋಲು ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸಿ. ಅಬ್ದುಲ್ ಕಲಾಂರ ಮಾತಿನಂತೆ ಸೋಲು ಅಂದರೆ ಫೈಲ್, ಅರ್ಥ ಫಸ್ಟ್ ಅಟೆಂಪ್ಟ್ ಇನ್ ಲರ್ನಿಂಗ್. ಕ್ರೀಡಾಪಟುಗಳನ್ನು ತರಬೇತುಗೊಳಿಸಿ ಶ್ರೇಷ್ಠ ಸಾಧನೆ ಹೊರಹೊಮ್ಮುವಂತೆ ಮಾಡಿ ಯಶಸ್ಸುಗಳಿಸಲು ಕಾರಣಕರ್ತರಾದ ಈ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು, ತರಬೇತುದಾರರು, ಆಡಳಿತ ಮಂಡಳಿಯವರ ಪ್ರಯತ್ನ ಶ್ಲಾಘನೀಯ ಎಂದು ಹೇಳುತ್ತಾ ರಾಜ್ಯ – ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತ್ ನಾಯಕ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸುತ್ತಾಕ್ರೀಡೆ ವಿದ್ಯಾರ್ಥಿಗಳಲ್ಲಿ ಮಾನಸಿಕ, ದೈಹಿಕ ಧೃಡತೆ, ಏಕಾಗ್ರತೆ, ಧೈರ್ಯ ಆತ್ಮವಿಶ್ವಾಸಗಳನ್ನು ಬೆಳೆಸಲು ಸಹಕಾರಿ ಕ್ರೀಡೆಯ ಮೂಲಕ ಮಕ್ಕಳಲ್ಲಿ ಹಿಂದವಿ ಸಾಮ್ರಾಜ್ಯ ಸ್ಥಾಪಕ ಶಿವಾಜಿ ಮಹಾರಾಜರಂತೆ ಸಂಸ್ಕಾರ, ದೇಶಭಕ್ತಿಯ ಪಾಠವೂ ಸಿಗುವಂತಾಗಬೇಕು. ಪ್ರಧಾನಿಯವರ ಕನಸಿನಂತೆ ನಮ್ಮ ವಿದ್ಯಾರ್ಥಿಗಳು ಒಲಿಂಪಿಕ್ಸ್ ನಲ್ಲಿಯೂ ಪದಕ ಗಳಿಸುವ ಸಾಧನೆ ಮಾಡಲು ತಯಾರಾಗಬೇಕು ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರೂ ಆಗಿರುವ ಶ್ರೀ ವಿನೋದ್ ಕುಮಾರ್ ರೈ ಯವರು ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಶುಭ ಕೋರಿದರು. ಶಾಲಾ ಹಿರಿಯ ವಿದ್ಯಾರ್ಥಿ ಕಾರ್ತಿಕ್ ಕೆ ಧ್ವಜಾರೋಹಣ ಗೈದರು. ಕ್ರೀಡಾಳು ಕು.ಯಶಸ್ವಿ ಸ್ಪರ್ಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹಾಯಕ ಉಪನಿರೀಕ್ಷಕ ಶ್ರೀ ಶ್ರೀಧರ್, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಗುರುಗಳು, ಶಿಕ್ಷಕ ವೃಂದ, ಶಿಕ್ಷಕ-ರಕ್ಷಕ ಸಂಘ ಮತ್ತು ಮಾತೃಭಾರತಿ ಸದಸ್ಯರ ಉಪಸ್ಥಿತಿಯಲ್ಲಿ ಜರುಗಿದ ಸಭಾಕಾರ್ಯಕ್ರಮವೂ ವಿದ್ಯಾರ್ಥಿನಿಯರ ವಂದೇ ಮಾತರಂ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡು ಅಶ್ವಿನಿ ಮತ್ತು ಅನುಷಾ ಮಾತಾಜಿಯವರಿಂದ ನಿರೂಪಿಸಲ್ಪಟ್ಟಿತ್ತು. ರಾಜೇಶ್ ಶ್ರೀಮಾನ್ ಧನ್ಯವಾದ ಸಮರ್ಪಿಸಿದರು.